ಹೆದ್ದಾರಿಗಳಲ್ಲಿ ಜಾನುವಾರುಗಳಿಂದಾಗುವ ಅಪಘಾತಗಳನ್ನು ತಪ್ಪಿಸಲು ‘ಬಾಹುಬಲಿ ಬೇಲಿ’ : ನಿತಿನ್ ಗಡ್ಕರಿ

ಹೆದ್ದಾರಿಗಳಲ್ಲಿ ವಾಹನಗಳು ತುಂಬಾ ವೇಗವಾಗಿ ಬರುತ್ತಿರುತ್ತವೆ ಆಗ ರಸ್ತೆ ದಾಟಲು ಪ್ರಯತ್ನಿಸುವ ಸಾಕಷ್ಟು ಜಾನುವಾರುಗಳು ವಾಹನಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತವೆ. ಹೀಗಾಗಿ ಜಾನುವಾರುಗಳು ಹೆದ್ದಾರಿಗೆ ಬಾರದಂತೆ ತಡೆಯಲು ಬಾಹುಬಲಿ ಬೇಲಿ ನಿಮಿರ್ಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೆದ್ದಾರಿಗಳಲ್ಲಿ ಬಾಹುಬಲಿ ದನಗಳ ಬೇಲಿ ಅಳವಡಿಸುವ ಯೋಜನೆ ರೂಪಿಸಿದ್ದಾರೆ. ಇದರಿಂದ ಹೆದ್ದಾರಿಗಳಲ್ಲಿ ಜಾನುವಾರುಗಳು ರಸ್ತೆ ದಾಟುವುದು ತಪ್ಪಲಿದೆ. ಇದರಿಂದ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂಬುದು ಸರ್ಕಾರದ ನಂಬಿಕೆ.

ಈ ಕುರಿತು ನಿತಿನ್ ಗಡ್ಕರಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಈ ಬೇಲಿ 1.20 ಮೀಟರ್ ಎತ್ತರವಿರಲಿದೆ. ದನ್ನು NH-30 ನ ವಿಭಾಗ 23 ರಲ್ಲಿ ಸ್ಥಾಪಿಸಲಾಗುವುದು, ಇದನ್ನು ತಯಾರಿಸಲು ಬಿದಿರನ್ನು ಬಳಕೆ ಮಾಡಲಾಗುತ್ತದೆ. ಈ ಬೇಲಿಗಳು ಕಡಿಮೆ ವೆಚ್ಚದಲ್ಲಿ ಹಾಗೂ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗುವುದು.

ಈ ಬಿದಿರುಗಳನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಲಾಗುತ್ತದೆ. ಬಾಹುಬಲಿಯಷ್ಟೇ ಗಟ್ಟಿಮುಟ್ಟಾಗಿರಲಿದೆ ಹಾಗಾಗಿ ಇದಕ್ಕೆ ಬಾಹುಬಲಿ ಬೇಲಿ ಎಂದು ಹೆಸರಿಡಲಾಗಿದೆ.

ಜಾನುವಾರುಗಳು ರಸ್ತೆ ದಾಟುವುದನ್ನು ತಡೆಯಲು ಹಾಗೂ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಅಪಾಯಕಾರಿ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಬೇಲಿಯನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ನಾವು ಭಾರತದ ಹೆದ್ದಾರಿಗಳುದ್ದಕ್ಕೂ ಜಾನುವಾರು ಬೇಲಿಗಳನ್ನು ನಿರ್ಮಿಸಲು ಮುಂದಾಗಿದ್ದೇವೆ ಎಂದು ಗಡ್ಕರಿ ತಿಳಿಸಿದ್ದಾರೆ.