ಆದಿವಾಸಿ ವ್ಯಕ್ತಿಯ ಪಾದಗಳನ್ನು ತೊಳೆದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದಿವಾಸಿ ವ್ಯಕ್ತಿ ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದಿದ್ದಾರೆ. ಬಿಜೆಪಿಯ ಪ್ರವೇಶ್ ಶುಕ್ಲಾ ಎಂಬುವವರು ಮದ್ಯದ ನಶೆಯಲ್ಲಿ ಆದಿವಾಸಿ ವ್ಯಕ್ತಿ ದಶ್ಮತ್ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಸುದ್ದಿ ಎಲ್ಲೆಡೆ ಹರಡಿತ್ತು. ಪ್ರವೇಶ್​ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇದೀಗ ಆ ಆದಿವಾಸಿ ವ್ಯಕ್ತಿಯನ್ನು ತಮ್ಮ ನಿವಾಸಕ್ಕೆ ಕರೆದಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕುರ್ಚಿಯ ಮೇಲೆ ಕೂರಿಸಿ ಅವರ ಪಾದಗಳನ್ನು ತೊಳೆದಿದ್ದಾರೆ. ಬಿಳಿ ಬಟ್ಟೆಯನ್ನು ಸುತ್ತಿ ಅವರಿಗೆ ಮಾಲಾರ್ಪಣೆ ಮಾಡಿದ್ದಾರೆ.

ಪ್ರವೇಶ್ ಶುಕ್ಲಾ ಮನೆ ಧ್ವಂಸ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾ ಅವರ ಮನೆಯನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕೆಡವಲಾಗಿದೆ. ಮಂಗಳವಾರ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಅಧಿಕಾರಿಗಳು ಬುಲ್ಡೋಜರ್‌ನೊಂದಿಗೆ ಆರೋಪಿಯ ಮನೆಗೆ ಆಗಮಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಆರೋಪಿಯನ್ನು ಬಂಧಿಸಿದ ವೀಡಿಯೊ ಹಳೆಯದು ಎಂದು ಹೇಳಿದರು, ಚುನಾವಣೆ ಹತ್ತಿರವಾಗಿರುವುದರಿಂದ ಅದನ್ನು ಮುನ್ನೆಲೆಗೆ ತರಲಾಗಿದೆ ಎಂದು ಹೇಳಿದ್ದಾರೆ.

ಇದು ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ ಪ್ರಸಾರ ಮಾಡಲಾದ ಹಳೆಯ ವೀಡಿಯೊ ಎಂದು ಆರೋಪಿಯ ಸಹೋದರಿ ಎಎನ್‌ಐಗೆ ತಿಳಿಸಿದ್ದಾರೆ. ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ರೇವಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.