ಅತ್ತೆ ಮನೆಯವರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಅಳಿಯ!

ಕುಷಾಯಿಗೂಡ: ಪತ್ನಿ ಹಾಗೂ ಅತ್ತೆ ಮನೆಯವರ ಕಿರುಕುಳ ತಾಳಲಾರದೆ ಪತಿ  ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎಂದು ಕುಷಾಯಿಗೂಡ ಪೊಲೀಸ್​ ಸಬ್​​​ಇನ್ಸ್​​​ಪೆಕ್ಟರ್​​​​ (ಪಿಎಸ್‌ಐ) ಷೇಕ್​ಷಫಿ ಹೇಳಿದ್ದಾರೆ. ಮೊಲುಗು ವೆಂಕಟ್ ರೆಡ್ಡಿ (38) ತನ್ನ ತಾಯಿ, ಪತ್ನಿ ಕಲ್ಯಾಣಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಹೈದರಾಬಾದ್ ನ ಕುಷಾಯಿಗೂಡ ಪೋಚಮ್ಮಗುಡಿಯಲ್ಲಿ ವಾಸಿಸುತ್ತಿದ್ದರು. ಖಾಸಗಿ ಉದ್ಯೋಗಿಯಾಗಿರುವ ವೆಂಕಟ್ ರೆಡ್ಡಿ ಜತೆ ತಾಯಿ ಇರುವುದು ಪತ್ನಿ ಹಾಗೂ ಅತ್ತೆಯವರಿಗೆ ಇಷ್ಟವಿರಲಿಲ್ಲ. ಇದರಿಂದಾಗಿ ಮತ್ತೊಂದು ಮನೆ ಮಾಡುವಂತೆ ಪೀಡಿಸುತ್ತಿದ್ದರು. ಇದರಿಂದ ದಂಪತಿ ನಡುವೆ ಕಲಹ ಉಂಟಾಗಿ ಎರಡು ತಿಂಗಳ ಹಿಂದೆ ವೆಂಕಟ್ ಪತ್ನಿ (Wife) ತಮ್ಮ ಮಕ್ಕಳನ್ನು ಕರೆದುಕೊಂಡು ವರಂಗಲ್‌ನಲ್ಲಿರುವ ಹುಟ್ಟೂರಿಗೆ ಹೋಗಿದ್ದರು.

ಹೀಗಿರುವಾಗ ಜುಲೈ 2ರಂದು ಪತ್ನಿ ಕಲ್ಯಾಣಿ ತನ್ನ ಪೋಷಕರೊಂದಿಗೆ ಗಂಡನ ಮನೆಗೆ ಬಂದು ನಾನಾ ರೀತಿಯ ಗಲಾಟೆ ಮಾಡಿದ್ದಾಳೆ. ಕೂಡಲೇ ಅತ್ತೆಯನ್ನು ಮನೆಯಿಂದ ಹೊರಗೆ ಕಳುಹಿಸುವಂತೆ ಒತ್ತಾಯಿಸಿದ್ದಾಳೆ. ಮೇಲಾಗಿ ಇಡೀ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆಸುವಂತೆಯೂ ಆಗ್ರಹಿಸಿದ್ದಾಳೆ.

ಮನೆ ಮಾನ ಮರ್ಯಾದೆ ಹೋಗುತ್ತದೆ ಎಂದು ಪತಿ ವೆಂಕಟ್ ಎಷ್ಟು ಹೇಳಿದರೂ ತನ್ನ ಪತ್ನಿ ಕಲ್ಯಾಣಿ ಕೇಳಲಿಲ್ಲ. ನೀವು ನಾಟಕ ಮಾಡ್ತಿದ್ದೀರಿ ಎಂದು ಗಂಡನ ಮನೆಯವರ ಬಗ್ಗೆ ಕಟಕಿಯಾಡಿದ್ದಾಳೆ. ಇದರಿಂದ ತೀವ್ರ ಮನನೊಂದ ವೆಂಕಟ್ ರೆಡ್ಡಿ ಅದೇ ದಿನ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಗಮನಿಸಿದ ತಾಯಿ ಕೂಡಲೇ ಮಗನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೆಂಕಟ್​​, ಬುಧವಾರ ಮೃತಪಟ್ಟಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ಕುಷಾಯಿಗೂಡ ಎಸ್‌ಐ ಷೇಕ್​ಷಫಿ ತಿಳಿಸಿದ್ದಾರೆ.