ಗಂಡ ಬಿಟ್ಟವಳಿಗೆ ಬಾಳು ಕೊಡುತ್ತೇನೆಂದು ಬಂದ ಅತ್ತೆ ಮಗ; ಮಹಿಳೆ ಗರ್ಭಿಣಿಯಾದ ವಿಷಯ ತಿಳಿದು ಪರಾರಿ

ಬೆಂಗಳೂರು ನಗರ: ಆಕೆ ಗಂಡನನ್ನ ಬಿಟ್ಟು ದೂರವಿದ್ದಳು. ಈ ಮಧ್ಯೆ ಆಕೆಯ ಸ್ವಂತ ಅತ್ತೆ ಮಗ, ನಿನಗೆ ನಾನು ಬಾಳು ಕೊಡುತ್ತೇನೆಂದು ಮಹಿಳೆಯ ಜೊತೆ 6 ವರ್ಷಗಳಿಂದ (Living Together Relationship) ಇಟ್ಟುಕೊಂಡಿದ್ದ. ಬಳಿಕ ಆಕೆಯನ್ನ ಮೂರು ತಿಂಗಳ ಗರ್ಭಿಣಿ ಮಾಡಿ, ಮನೆಯವರಿಗೆ ಮದುವೆಗೆ ಒಪ್ಪಿಸುತ್ತೇನೆ ಎಂದು ಹೋಗಿದ್ದವ ಪರಾರಿಯಾಗಿದ್ದಾನೆ. ಇದೀಗ ಆಕೆ ನ್ಯಾಯ ಕೊಡಿ ಎಂದು ಪ್ರಿಯಕರನ ಮನೆ ಬಳಿ ಹೋಗಿದ್ದು, ಆತನ ಪೋಷಕರು ಮಹಿಳೆಗೆ ನಿಂದಿಸಿ ಕಳುಹಿಸಿದ್ದಾರೆ. ಈ ಕುರಿತು ನೊಂದ ಮಹಿಳೆ ಪೀಣ್ಯ ಪೊಲೀಸ್ ಠಾಣೆ (Peenya Police Station)ಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.

6 ವರ್ಷದ ಹಿಂದೆ ನಿನಗೆ ಬಾಳು ಕೊಡುತ್ತೇನೆಂದು ಬಂದಿದ್ದ ಅತ್ತೆ ಮಗ

26 ವರ್ಷದ ರಂಜಿತ 10 ವರ್ಷಗಳಿಂದ ಪತಿಯಿಂದ ದೂರ ಇದ್ದು, ತನ್ನ ತಂದೆಯ ತಂಗಿ ಲಕ್ಕಮ್ಮ ಎಂಬುವವರ ಮಗನಾದ ಕರಣ್ ಕುಮಾರ್‌ ಎಂಬಾತ ಚಿಕ್ಕಂದಿನಿಂದಲೂ ಆಕೆಗೆ ಪರಿಚಯವಿದ್ದ. 6 ವರ್ಷದ ಹಿಂದೆ ನಿನಗೆ ಬಾಳು ಕೊಡುತ್ತೇನೆ, ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದಾನೆ. ಬಳಿಕ ಕರಣ್ ಕುಮಾರ್ ಮತ್ತು ರಂಜಿತ ತುಮಕೂರಿನ ಯಲಾಪುರದಲ್ಲಿ, ಬಾಡಿಗೆ ಮನೆ ಮಾಡಿಕೊಂಡು 4ವರ್ಷಗಳ ಕಾಲ ವಾಸವಾಗಿದ್ದಾರೆ. ಕರಣ್ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದು, ಮನೆಯ ಬಾಡಿಗೆ ಮತ್ತು ಸಂಸಾರ ನಡೆಸಲು ಮಹಿಳೆಯೇ ತಂದು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ ಮಹಿಳೆ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ, ನೀನು ಏನೂ ಯೋಚನೆ ಮಾಡಬೇಡ ನಾನು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸುತ್ತಿದ್ದ.

ಇದಾದ ಬಳಿಕ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿನ ಪೀಣ್ಯಾದ ವಿದ್ಯಾನಗರದ ವಿಳಾಸಕ್ಕೆ ಬಂದು ವಾಸವಿರುತ್ತಾರೆ. ಈಗ ಆಕೆ 3 ತಿಂಗಳ ಗರ್ಭಿಣಿಯಾಗಿದ್ದು, ಈ ವಿಷಯವನ್ನು ಕರಣ್ ಕುಮಾರ್​ಗೂ ಹೇಳಿದ್ದಾಳೆ. ನಂತರ ಯುವಕ ನಿನ್ನನ್ನು ಮದುವೆ ಮಾಡಿಕೊಳ್ಳಲು ನಮ್ಮ ಮನೆಯವರು ಒಪ್ಪುತ್ತಿಲ್ಲವೆಂದಿದ್ದಾನೆ. ಬಳಿಕ ಮಹಿಳೆ ಅವನಿಗೆ ನನ್ನ ಜೀವನ ಹಾಳು ಮಾಡಬೇಡ. ಮದುವೆ ಮಾಡಿಕೊ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದು, 15 ದಿನಗಳ ಹಿಂದೆ ಕರಣ್ ಕುಮಾರ್ ಮದುವೆ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿ ಬರುತ್ತೇನೆಂದು ಹೇಳಿ ಆಕೆಯಿಂದ 5,000/- ರೂ.ಗಳನ್ನು ಪಡೆದುಕೊಂಡು ಹೋದವನು ಇನ್ನೂ ವಾಪಸ್ ಬಂದಿಲ್ಲ.

ಯುವಕನ ತಂದೆ ತಾಯಿಯಿಂದ ಬೆದರಿಕೆ

ಇನ್ನು ನೊಂದ ಮಹಿಳೆ ಕರಣ್​ರವರ ಮನೆಯ ಹತ್ತಿರ ಹೋಗಿ ನನ್ನನ್ನು ಮದುವೆ ಮಾಡಿಕೊ ಎಂದು ಕೇಳಿದ್ದಾಳೆ. ಈ ವೇಳೆ ಅವರ ತಾಯಿ ಮತ್ತು ಅವರ ಮಗ ಮುರಳಿ, ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ನೀನೇನಾದರೂ ನಮ್ಮ ಏರಿಯಾಗೆ ಬಂದರೆ, ನಿನ್ನ ಕೈಕಾಲು ಮುರಿಯುತ್ತೇವೆಂದು ಗಲಾಟೆ ಮಾಡಿ ಸ್ಥಳದಿಂದ ಕಳಸಿದ್ದಾರಂತೆ. ನನ್ನನ್ನು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನನಗೆ ಮೋಸ ಮಾಡಿರುವ ಕರಣ್ ಹಾಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಪ್ರಾಣ ಬೆದರಿಕೆ ಹಾಕಿರುವ ಅವರ ತಾಯಿ ಸೇರಿದಂತೆ ಮನೆಯವರ ವಿರುದ್ಧ ಈಗ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ಪ್ರಕರಣ ದಾಖಲು ಮಾಡಿದ್ದಾರೆ.