ಬೆಂಗಳೂರಿನ ಗಾಂಧಿ ಬಜಾರ್​ನಲ್ಲಿ ಇನ್ನೂ ಮುಗಿಯದ ಕಾಮಗಾರಿ: ವ್ಯಾಪಾರಸ್ಥರ ಆಕ್ರೋಶ

ಬೆಂಗಳೂರು: ಗಾಂಧಿ ಬಜಾರ್ ಸಿಲಿಕಾನ್ ಸಿಟಿ ಜನರ ವ್ಯಾಪಾರ ವಹಿವಾಟಿಗೆ ಹಾಟ್ ಸ್ಪಾಟ್. ಆ ಹಾಟ್ ಸ್ಪಾಟ್ ನಲ್ಲಿ ಸಧ್ಯ ಒಂದು ವರ್ಷದಿಂದ ಕಾಮಗಾರಿ ನಡೆತಾನೇ ಇದೆ. ಆದ್ರೂ ಆ ಕಾಮಗಾರಿ ಇನ್ನು ಕೂಡ ಕಂಪ್ಲೀಟ್ ಆಗಿಲ್ಲ. ಹೀಗಾಗಿ ವ್ಯಾಪಾರ ವಹಿವಟುಗಳಿಲ್ಲದೇ ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ‌ ಗಾಂಧಿಬಜಾರ್ ಅಂತ ಹೇಳಿದ್ರೆ, ಎಲ್ಲರಿಗೂ ವ್ಯಾಪಾರ ವಹಿವಾಟಿಗೆ ಹಾಟ್ ಸ್ಪಾಟ್. ಆದ್ರೆ ಈ ಹಾಟ್ ಸ್ಪಾಟ್ ನಲ್ಲಿ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೀವಿ ಅಂತ ಬಿಬಿಎಂಪಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ಕಾಮಗಾರಿ ಆರಂಭಮಾಡಿದ್ರು.‌ ಆದ್ರೆ ಈ ಕಾಮಗಾರಿ ಆರಂಭ ಮಾಡಿ ಒಂದು ವರ್ಷ ಕಳೆಯುವುದಕ್ಕೆ ಬಂದಿದೆ. ಆದ್ರೆ ಇನ್ನೂ ಕಾಮಗಾರಿ ಮಾತ್ರ ಮುಗಿದಿಲ್ಲ. ಹೀಗಾಗಿ ವ್ಯಾಪಾರಸ್ಥರು ಸ್ಥಳೀಯ ಶಾಸಕರು ಹಾಗು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಕಳೆದ ಒಂದು ವರ್ಷದಿಂದ ನಗರೋತ್ಥಾನ ಯೋಜನೆಯ ಅಡಿಯಲ್ಲಿ ಗಾಂಧಿ ಬಜಾರ್ ನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.‌ ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್, ಬಟ್ಟೆ ವ್ಯಾಪಾರಸ್ಥರು, ಹೀಗೆ 100 ಕ್ಕು ಹೆಚ್ಚು ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದೆ. ರಸ್ತೆ ಅಭಿವೃದ್ಧಿ ಮಾಡ್ತಿವಿ, ರಸ್ತೆಯನ್ನ ಹೈಟೆಕ್ ಮಾಡ್ತಿವಿ. ಜೊತೆಗೆ ಮೂರೇ ಮೂರು ತಿಂಗಳಲ್ಲಿ ಕಾಮಗಾರಿ ಮುಗುಸ್ತೀವಿ ಅಂತ ಕಾಮಗಾರಿ ಆರಂಭಿಸಲಾಯಿತು.‌ ಆದ್ರೆ ಕಾಮಗಾರಿ ಮಾಡಿ ಒಂದು ವರ್ಷವಾದ್ರು ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.‌ ಸಾಲದ್ದಕ್ಕೆ ಟು ವೇ ರಸ್ತೆಯಲ್ಲಿ ಒನ್‌ ವೇ ರಸ್ತೆ ಮಾಡಿದ್ದಾರೆ.‌ ಪಾರ್ಕಿಂಗ್ ಮಾಡುವುದಕ್ಕೂ ಕಷ್ಟ ಆಗ್ತಿದೆ.‌ ಈ ವೇಳೆ ವ್ಯಾಪರ ಆಗದೇ ಇರುವ ಮುಖ್ತ ರಸ್ತೆಯ ವ್ಯಾಪಾರ ಮಾಡುವುದಕ್ಕೆ ಶೆಲ್ಟರ್ ಗಳನ್ನ ಹಾಕಿದ್ದಾರೆ. ಈ ಶೆಲ್ಟರ್​ಗಳ್ಲಲಿ ವ್ಯಾಪಾರ ಮಾಡುವುದಕ್ಕೆ ಸಾಧ್ಯಾನೇ ಇಲ್ಲ.‌ ನಮಗೆ ಶೆಲ್ಟರ್ – ಶೆಡ್ ಏನೂ ಬೇಡ ನಮಗೆ ನೆಮ್ಮದಿಯಾಗಿ ವ್ಯಾಪಾರ ಮಾಡುವುದಕ್ಕೆ ಅವಕಾಶ ಮಾಡಿ ಕೊಡಿ ಅಂತ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಒಟ್ಟು 30 ಶೆಡ್​ಗಳನ್ನ ಮಾಡಿದ್ದಾರೆ. ಆದ್ರೆ ಈ ಶೆಡ್ ಗಳನ್ನ ಮಾಡುವಾಗ ವ್ಯಾಪಾರಸ್ಥರನ್ನ ಒಂದೇ ಒಂದು ಮಾತು ಕೇಳಿಲ್ಲ. ಅಲ್ಲದೇ ಶೆಲ್ಟರ್ ಗಳಲ್ಲಿ ವ್ಯಾಪಾರ ಮಾಡುವುದಕ್ಕೆ ಸಾಧ್ಯಾನೆ ಇಲ್ಲ. ಕಾಮಾಗರಿ ನಡೆಯುತ್ತಿರುವ ಕಾರಣದಿಂದಾಗಿ ಜನರು ಗಾಂಧಿನಗರದತ್ತ ಬರ್ತಿಲ್ಲ. ಇದೀಗಾ ಮತ್ತೆ ಅಂಗಡಿಗಳ ಚೇಂಜ್ ಮಾಡಿದ್ರೆ ಗ್ರಾಹಕರು ಬರ್ತಾರಾ? ಅಲ್ಲದೇ ಶೆಲ್ಟರ್ ಗಳಲ್ಲಿ ನಮ್ಮ ಅಂಗಡಿಗಳ ಹೆಸರುಗಳನ್ನ ಹಾಕುವುದಕ್ಕೆ ಜಾಗವು ಇಲ್ಲ. ಈ ಕಾರಣದಿಂದಾಗಿ ನಾವು ಶೆಲ್ಟರ್ ಗಳನ್ನ ನಿರ್ಮಿಸಿದ್ರು ವ್ಯಾಪಾರಸ್ಥರು ಹೋಗ್ತಿಲ್ಲ ಅಂತ ಗಾಂಧಿ‌ ಬಜಾರ್ ಟ್ರೇಡರ್ಸ್ ಹಾಗೂ ಬಿಲ್ಡಿಂಗ್ ಒನರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಂಕರ್ ಗುರುಹಾದ್ವಾಕರನಾಥ್ ತಿಳಿಸಿದ್ರು.‌

ಇನ್ನು, ಈ ಕುರಿತಾಗಿ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಅವರನ್ನ ಪ್ರಶ್ನಿಸಿದ್ದಕ್ಕೆ ಕಾಮಗಾರಿಯನ್ನ ಆರಂಭಿಸುವ ಮೊದಲೇ ವ್ಯಾಪಾರಸ್ಥರಿಗೆ ಅದರ ಡೆಮೋ ತೋರಿಸಿದ್ದೀವಿ. ಆಗಾ ಒಪ್ಪಿಕೊಂಡವರು ಈಗಾ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೇರಡು ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ.‌ ವ್ಯಾಪಾರಸ್ಥರಿಗೆ ಸಮಸ್ಯೆಯಾಗಬಾರದು ಅಂತ ಶೆಡ್ ಗಳನ್ನ ಹಾಕಿದ್ರೆ ಅವರು ವ್ಯಾಪಾರ ಆಗೋದಿಲ್ಲ. ನಾವು ಹೋಗುದಿಲ್ಲ ಅಂತಿದ್ದಾರೆ.‌ ಮಳೆ ಕಾರಣದಿಂದಾಗಿ ಹಾಗೂ ಕೆಲ ಗುತ್ತಿಗೆದಾರರ ಸಮಸ್ಯೆಯಿಂದಾಗಿ ಕೆಲಸ ವಿಳಂಬವಾಗಿದೆ. ಡಲ್ಟ್ ಅಧಿಕಾರಿಗಳೊಂದಿಗೂ ಮಾತಾನಾಡಿದ್ದೇನೆ‌. ಆದಷ್ಟು ಬೇಗ ಕಾಮಗಾರಿ ಮುಗಿಯಲಿದೆ ಅಂತ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಹೇಳಿದ್ರು.‌

ಒಟ್ನಲ್ಲಿ , ವ್ಯಾಪಾರಸ್ಥರಿಗೆ ಅನುಕೂಲವಾಗುವ ಕಡೆ ಶೆಡ್ ಗಳನ್ನ ನಿರ್ಮಿಸಬೇಕಿದ್ದ ಅಧಿಕಾರಿಗಳು, ವ್ಯಾಪಾರಸ್ಥರ ಪರ್ಮಿಷನ್ ಇಲ್ಲದೇ ಶೆಲ್ಟರ್ ನಿರ್ಮಾಣವೇನೋ ಆಗಿದೆ. ಆದ್ರೆ ಇಲ್ಲಿಯವರೆಗೂ ವ್ಯಾಪರಸ್ಥರು ಮಾತ್ರ ಶೆಡ್ ಗಳತ್ತ ಮುಖ ಮಾಡ್ತಿಲ್ಲ. ಹೀಗಾಗಿ ಸಾರ್ವಜನಿಕರ ತೆರಿಗೆ ಹಣವನ್ನ ಪೋಲು ಮಾಡಲು ಅಧಿಕಾರಿಗಳು ಮುಂದಾಗುತ್ತಿರುವ ಬಗ್ಗೆ ಒಂದು ಕಡೆ ಆಕ್ಷೇಪ ವ್ಯಕ್ತವಾಗುತ್ತಿದ್ರೆ, ಮತ್ತೊಂದೆಡೆ ಆದಾಷ್ಟು ಬೇಗ ಕಾಮಗಾರಿ ಮುಗಿಸುವಂತೆ ವ್ಯಾಪಾರಸ್ಥರು ದುಂಬಾಲು ಬಿದ್ದಿದ್ದಾರೆ.