ದೇವರಿಗೆ ಮೇಕೆ ಬಲಿಕೊಟ್ಟ.. ಆದ್ರೆ ಅದರ ಕಣ್ಣುಗಳೇ ವ್ಯಕ್ತಿಯ ಬಲಿ ಪಡೆದವು!

ರಾಯ್ಪುರ: ವ್ಯಕ್ತಿಯೊಬ್ಬ ದೇವರಿಗೆ ಬಲಿಕೊಟ್ಟ ಮೇಕೆಯನ್ನು (Goat) ಬಲಿಕೊಟ್ಟ. ಆದರೆ ಮೇಕೆ ಕಣ್ಣುಗಳೇ ಆತನನ್ನು ಬಲಿ ತೆಗೆದುಕೊಂಡ ಘಟನೆ ಛತ್ತೀಸಗಢದಲ್ಲಿ  ನಡೆದಿದೆ.

ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಬಗರ್ ಸಾಯಿ (50) ಎಂಬ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆಯನ್ನು ಬಲಿ ಕೊಡಲು ಯೋಜಿಸಿದ್ದ. ಮದನ್‌ಪುರ ಗ್ರಾಮದ ಇತರ ನಿವಾಸಿಗಳೊಂದಿಗೆ ಭಾನುವಾರ ಖೋಪಾಧಾಮ್‌ಗೆ ಆಗಮಿಸಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟರು.

ಬಲಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ಮೇಕೆ ಮಾಂಸವನ್ನು ಬೇಯಿಸಿ ಊಟಕ್ಕೆ ಸಿದ್ಧಪಡಿಸಿದರು. ಪೂಜೆ ಕಾರ್ಯ ಮುಗಿದ ಮೇಲೆ ಎಲ್ಲರೂ ಮಾಂಸದೂಟಕ್ಕೆ ಸಿದ್ಧರಾಗಿ ಕುಳಿತರು.

ಊಟ ಬಡಿಸುವ ವೇಳೆ ಮೇಕೆಯ ಕಣ್ಣು ಬಗರ್‌ ಸಾಯಿಗೇ ಊಟದಲ್ಲಿ ಸಿಕ್ಕಿದೆ. ಅದನ್ನು ಅವರು ತಿಂದಿದ್ದಾರೆ. ಈ ವೇಳೆ ಮೇಕೆ ಕಣ್ಣು ಆತನ ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದೆ. 

ಉಸಿರಾಟದ ಸಮಸ್ಯೆಯಿಂದ ಏದುಸಿರು ಬಿಡುತ್ತಿದ್ದ ಬಗರ್‌ ಸಾಯಿಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ದೇವರಿಗೆ ಬಲಿಕೊಟ್ಟ ಮೇಕೆಯ ಕಣ್ಣು ಆತನನ್ನೇ ಬಲಿ ತೆಗೆದುಕೊಂಡಿತು.