ಹಂತ ಹಂತವಾಗಿ ಮೀಸಲಾತಿ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ – 25,000 ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶದಲ್ಲಿ ಪ್ರಸ್ತುತ ಅನುಸರಿಸುತ್ತಿರುವ ಮೀಸಲಾತಿ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕಲು ಮತ್ತು ಪರ್ಯಾಯ ವಿಧಾನವನ್ನು ರೂಪಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಅಲ್ಲದೇ ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಿದೆ.

ಪ್ರಕರಣ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರ ಪೀಠವು, ಅರ್ಜಿಯು ಕ್ಷುಲ್ಲಕ ಹಾಗೂ ಅನಗತ್ಯವಾಗಿದೆ. ಈ ಹಿನ್ನೆಲೆ ಅರ್ಜಿ ವಜಾ ಮಾಡುವುದಲ್ಲದೇ, ಅರ್ಜಿದಾರರಾದ ವಕೀಲ ಸಚಿನ್ ಗುಪ್ತಾ ಅವರ ಮೇಲೆ 25,000 ರೂ. ದಂಡ ವಿಧಿಸಿದೆ ಎಂದು ಹೇಳಿದೆ.

ಈ ಪಿಐಎಲ್ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ. ನಾವು 25,000 ರೂ. ದಂಡವನ್ನು ಸುಪ್ರೀಂ ಕೋರ್ಟ್‌ನ ವಕೀಲರ ಕಲ್ಯಾಣ ನಿಧಿಗೆ ಪಾವತಿಸಲು ನಿರ್ದೇಶಿಸುತ್ತೇವೆ. ಪಾವತಿಯ ರಶೀದಿಯನ್ನು 2 ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. 

ಇದೇ ಅರ್ಜಿದಾರರು ಜಾತಿ ವ್ಯವಸ್ಥೆಯ ಮರುವರ್ಗೀಕರಣ ಕೋರಿ ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇದೇ ಪೀಠವು ವಜಾಗೊಳಿಸಿದೆ.