ಹಾಸನದ ಜೀವನದಿಯ ಒಡಲಿನಲ್ಲಿ ಜಲ ಕ್ಷಾಮದ ಭೀತಿ; ಮಳೆಯಿಲ್ಲದೆ ಬರಿದಾಗುತ್ತಿದೆ ಹೇಮಾವತಿ ಜಲಾಶಯ

ಹಾಸನ: ರಾಜ್ಯದಲ್ಲಿ ಅನೇಕ ಜಲಾಶಯಗಳು ಮಳೆಯಿಲ್ಲದೆ ಬರಿದಾಗುತ್ತಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ  ಶುರುವಾಗಿದೆ. ಕೆಆರ್​ಎಸ್​ ಜಲಾಶಯ ಕೂಡ ತೀವ್ರ ಕುಸಿತ ಕಂಡಿದ್ದು, ಇನ್ನು ಕೆಲವು ದಿನಗಳಲ್ಲಿ ಮಳೆಯಾಗದಿದ್ದರೆ ಜಲಾಶಯವನ್ನೇ ನಂಬಿಕೊಂಡ ಜಿಲ್ಲೆಗಳು ಕುಡಿಯುವ ನೀರಿಗಾಗಿ ಹಾಹಾಕಾರ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಅದರಂತೆ ಇದೀಗ ಜಿಲ್ಲೆಯಲ್ಲೂ ಮಳೆ‌ ಕೊರತೆ ಉಂಟಾಗಿ, ಪ್ರಮುಖ ಜಲಾಶಯ ಹೇಮಾವತಿ ಒಡಲು ಬರಿದಾಗುತ್ತಿದೆ.

ಹೌದು 2922 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 2890 ಅಡಿ ನೀರು ಮಾತ್ರಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯ 2907 ಅಡಿ ನೀರು ಹೊಂದಿತ್ತು. ಈ ವರ್ಷ ಮಳೆಯ ತೀವ್ರ ಕೊರತೆಯಿಂದ ದಿನೇ ದಿನೇ ಹೇಮಾವತಿ ಜಲಾಶಯ ಬರಿದಾಗುತ್ತಿದೆ. ಒಟ್ಟು 37 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈ ವರ್ಷ ಜೂನ್ ಅಂತ್ಯದಲ್ಲಿ ಕೇವಲ 14 ಟಿಎಂಸಿ ನೀರಿನ ಸಂಗ್ರಹ ಮಾತ್ರವಿದ್ದು, ಇದರಲ್ಲಿ ಕೇವಲ 9 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಿದೆ.

ಇದೇ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 24 ಟಿಎಂಸಿ ನೀರಿನ ಸಂಗ್ರಹ ಹೊಂದಿತ್ತು. ಇದೀಗ ಹೇಮಾವತಿ ನದಿ ಕೇವಲ 59 ಕ್ಯೂಸೆಕ್ ಒಳಹರಿವಿನೊಂದಿಗೆ ಬಹುತೇಕ ಹರಿವು ನಿಲ್ಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3477 ಕ್ಯೂಸೆಕ್ ನೀರಿನ ಹರಿವು ಜಲಾಶಯ ಹೊಂದಿದ್ದು, ಈ ಬಾರಿ ಮಳೆಯಿಲ್ಲದೆ ಸಂಪೂರ್ಣ ಬರಿದಾಗುತ್ತಿದೆ. ಇನ್ನು ಕೆಲವು ದಿನ ಮಳೆಯಾಗದೇ ಇದ್ದರೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವ ಆತಂಕ ಎದುರಾಗಿದೆ.