ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನ ಅಪಹರಿಸಿ ಹಣ ದೋಚಿದ್ದ ಪ್ರಕರಣ; ಐವರಲ್ಲಿ ಇಬ್ಬರ ಬಂಧನ

ಬೆಂಗಳೂರು: ಹಣಕ್ಕಾಗಿ ವ್ಯಕ್ತಿಯನ್ನ ಅಪಹರಿಸಿ, 18 ಸಾವಿರ ಹಣ, ಮೊಬೈಲ್, ಪರ್ಸ್ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಲ್ಲಿ ಇಬ್ಬರು  ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಯಶವಂತ್, ನಂದೀಶ್ ಬಂಧಿತ ಆರೋಪಿಗಳು. ಜೂ.19ರಂದು ಬೆಳಗಿನ ಜಾವ 2ರಿಂದ 3 ಗಂಟೆ ಸುಮಾರಿಗೆ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನ, ಗಿರಿನಗರದಲ್ಲಿ ವಾಹನದಿಂದ ಇಳಿದು ಹೋಗುವಾಗ ಆಟೋದಲ್ಲಿ ಬಂದಿದ್ದ ಐವರ ತಂಡ ಅಪಹರಿಸಿ, ಹಣವನ್ನ ಕಿತ್ತುಕೊಂಡು ಬಳಿಕ ಆಶ್ರಮವೊಂದರ ಬಳಿ ಬಿಟ್ಟು ಪರಾರಿಯಾಗಿದ್ದರು. ಈ ಕುರಿತು ಸಂತ್ರಸ್ಥ ವ್ಯಕ್ತಿ ಗಿರಿನಗರ ಠಾಣೆಗೆ ದೂರು ನೀಡಿದ್ದರು. ಇದೀಗ ಪೊಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಮನಗರ: ರಾತ್ರಿ ವೇಳೆ ಬೈಕ್​ಗಳನ್ನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕನಕಪುರ ನಿವಾಸಿಗಳಾದ ದೀಪು, ರಾಕೇಶ್, ಕಿರಣ್, ಮನು ಹಾಗೂ ಹರ್ಷಿತ್ ಬಂಧಿತ ಆರೋಪಿಗಳು. ಬಂಧಿತರಿಂದ 3 ಸಾವಿರ ನಗದು, ಮೂರು ಫೋನ್​ಗಳು, ಎರಡು ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರ: ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ಮನೆ ಬಾಗಿಲು ಮುರಿದು ಕಳ್ಳರು ಕೈಚಳಕ ತೋರಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನ ಕಳ್ಳತನ ಮಾಡಿದ್ದಾರೆ. ಶಶಿಧರ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, 53 ಲಕ್ಷ ನಗದು, ಒಂದು ಕೆಜಿ ಚಿನ್ನಾಭರಣ ಸೇರಿದಂತೆ 6 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಇನ್ನು ಮನೆಯವರು ಜೂ.28ನೇ ತಾರೀಖಿನಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತವಾಗಿ ತುಮಕೂರಿನ ಸಿದ್ದಗಂಗಾಮಠಕ್ಕೆ ಹೋಗಿದ್ದರು. ಇದನ್ನೇ ಗಮನಿಸುತ್ತಿದ್ದ ಗ್ಯಾಂಗ್​ ಹೊಂಚು ಹಾಕಿ ಮನೆಯ ಬಾಗಿಲು ಹೊಡೆದು ಲಾಕರ್​ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನು ಈ ಕುರಿತು ಕೂಡಲೇ ಸಹೋದರ ಶಶಿಧರ್​ಗೆ ಮಾಹಿತಿ ನೀಡಿದ್ದು, ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳರ ಕೃತ್ಯ ಕಂಡು ಶಾಕ್ ಆಗಿದ್ದಾರೆ. ಮನೆಯ ಬಾಗಿಲುಗಳನ್ನ ಹೊಡೆದು ಹಾಕಿ ಮನೆಯ ಒಳನುಗ್ಗಿದ್ದ ಕದೀಮರು ಸಿಸಿಟಿವಿ ಡಿವಿಆರ್ ಸಮೇತವಾಗಿ ಕದ್ದೋಯ್ದಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್, ಸೂರ್ಯನಗರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.