ಸರ್ಕಾರಿ ಬಸ್​ನಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ; ಆರೋಪಿ ವಶಕ್ಕೆ

ಮಂಗಳೂರು: ಬಸ್ಸಿನಲ್ಲಿ ವಿವಾಹಿತ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದ ಸಹ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಮ್ಮಿಂಜೆ ಗ್ರಾಮದ ಸುಬ್ರಹ್ಮಣ್ಯ ಭಟ್ ಅನುಚಿತವಾಗಿ ವರ್ತಿಸಿದ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳದಿಂದ ಪುತ್ತೂರು ಕಡೆಗೆ ಕೆಎಸ್​ಆರ್​ಟಿಸಿ ಬಸ್ ತೆರಳುತ್ತಿತ್ತು. ಈ ಬಸ್​ನಲ್ಲಿ ಶಹನಾಜ್ (20) ಮಹಿಳೆ ಪ್ರಯಾಣಿಸುತ್ತಿದ್ದಳು. ಬಸ್​ ಮುರ ಗ್ರಾಮದ ಬಳಿ ಬಸ್​ ಬರುತ್ತಿದ್ದಂತೆ ಮಹಿಳೆಯ ಹಿಂದಿನ ಸೀಟ್​ನಲ್ಲಿ ಕುಳಿತಿದ್ದ ಸುಬ್ರಹ್ಮಣ್ಯ ಭಟ್ ಸೀಟಿನ ಮಧ್ಯದಲ್ಲಿ ಕೈಹಾಕಿ ಸೊಂಟದ ಕೆಳ ಭಾಗ ಹಿಡಿದು ಅಶ್ಲೀಲವಾಗಿ ವರ್ತಿಸಿದ್ದಾನೆ.

ಮಹಿಳೆ ಪ್ರಶ್ನಿಸಿದ್ದಕ್ಕೆ ಸುಬ್ರಹ್ಮಣ್ಯ ಭಟ್ ಬೊಳುವಾರಿನಲ್ಲಿ ಬಸ್​ನಿಂದ ಇಳಿದಿದ್ದಾನೆ. ಈ ಬಗ್ಗೆ ಶಹನಾಜ್ ವಿಡಿಯೋ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಸುಬ್ರಹ್ಮಣ್ಯ​ ಭಟ್​​ನನ್ನು ವಶಕ್ಕೆ ಪಡೆದು ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಆರೋಪಿ ಸುಬ್ರಹ್ಮಣ್ಯ ಭಟ್​ಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.