ನವದೆಹಲಿ: ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದೆನಿಸಿರುವ ಮತ್ತು ಭಾರತದಲ್ಲಿ ಅತಿಹೆಚ್ಚು ಐಟಿ ಉದ್ಯೋಗಿಗಳನ್ನು ಹೊಂದಿರುವ ಹಾಗೂ ಅತ್ಯುತ್ತಮ ಕೆಲಸದ ವಾತಾರವಣಕ್ಕೆ ಹೆಸರುವಾಸಿಯೂ ಆಗಿರುವ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಒಳ್ಳೆಯ ಹೆಸರಿಗೆ ಮಸಿ ಮೆತ್ತುವಂತಹ ಬೆಳವಣಿಗೆ ಬೆಳಕಿಗೆ ಬಂದಿದೆ. ಟಿಸಿಎಸ್ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲಸ ಕೊಡಲು ಕನ್ಸಲ್ಟೆನ್ಸಿ ಸಂಸ್ಥೆಗಳಿಂದ ಲಂಚ ಸ್ವೀಕರಿಸಿದ ಪ್ರಕರಣ ಇದು. ಟಿಸಿಎಸ್ನ ಕೆಲ ಹಿರಿಯ ಅಧಿಕಾರಿಗಳೇ ಈ ಕೃತ್ಯದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ದಿ ಮಿಂಟ್ ಪತ್ರಿಕೆ ಈ ಎಕ್ಸ್ಕ್ಲೂಸಿವ್ ವರದಿ ಪ್ರಕಟಿಸಿದ್ದು, 100 ಕೋಟಿ ರೂ ಮೊತ್ತದ ಕರ್ಮಕಾಂಡದ ಕಥೆ ಇದಾಗಿದೆ. ಕಂಪನಿಯ ಉದ್ಯೋಗಿಯೊಬ್ಬರು ಈ ಪ್ರಕರಣವನ್ನು ಸಿಇಒ ಮತ್ತು ಸಿಒಒ ಗಮನಕ್ಕೆ ತಂದಿದ್ದರಿಂದ ಕರ್ಮಕಾಂಡ ಬಯಲಿಗೆ ಬಂದಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದರೆಂದು ಆರೋಪಿಸಲಾಗಿರುವ ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ನ ಗ್ಲೋಬಲ್ ಹೆಡ್ ಇಎಸ್ ಚಕ್ರವರ್ತಿ ಸೆರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಟಿಸಿಎಸ್ ವಜಾಗೊಳಿಸಿದೆ. ಜೊತೆಗೆ, ಮೂರು ಸ್ಟ್ಯಾಫಿಂಗ್ ಸಂಸ್ಥೆ ಅಥವಾ ಕನ್ಸಲ್ಟೆನ್ಸಿ ಸಂಸ್ಥೆಗಳನ್ನು ನಿಷೇಧಿಸಿದೆ.
ಟಿಸಿಎಸ್ನಲ್ಲಿ ಇಂಥದ್ದೊಂದು ಭ್ರಷ್ಟಾಚಾರ ಹಗರಣ ಬಯಲಿಗೆ ಬಂದಿದ್ದು ಇದೇ ಮೊದಲು. ಸಂಸ್ಥೆಯ ಹಿರಿಯರಾದ ಕೆ ಕೃತಿವಾಸನ್ ಅವರು ಸಿಇಒ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಆಗಿದೆ.
ಗಮನಿಸಬೇಕಾದ ಸಂಗತಿ ಎಂದರೆ ಉದ್ಯೋಗ ಹಂಚಿಕೆಗೆ ಲಂಚ ಸ್ವೀಕರಿಸುವ ಕಾರ್ಯ ಕಳೆದ 3 ವರ್ಷಗಳಿಂದ ನಡೆದಿತ್ತು ಎಂದು ಹೇಳಲಾಗುತ್ತಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಉದ್ಯೋಗಿ ಈ ಬಗ್ಗೆ ಸಿಇಒ ಮತ್ತು ಸಿಒಒ ಅವರಿಗೆ ರಹಸ್ಯವಾಗಿ ಮಾಹಿತಿ ಕೊಟ್ಟಿದ್ದರು. ಟಿಸಿಎಸ್ನ ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ನ ಗ್ಲೋಬಲ್ ಮುಖ್ಯಸ್ಥ ಇಎಸ್ ಚಕ್ರವರ್ತಿ ಅವರು ಹೈರಿಂಗ್ ಏಜೆನ್ಸಿಗಳಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆ ಬಳಿಕ ಟಿಸಿಎಸ್ನ ಟಾಪ್ ಮ್ಯಾನೇಜ್ಮೆಂಟ್ ಒಂದು ಕಮಿಟಿ ರಚಿಸಿ ತನಿಖೆ ನಡೆಸಿತು. ಅದಾದ ಬಳಿಕ ನೇಮಕಾತಿ ವಿಭಾಗದ ಮುಖ್ಯಸ್ಥರನ್ನು ರಜೆಯ ಮೆಲೆ ಕಳುಹಿಸಿತು. ಆರ್ಎಂಜಿಯ ನಾಲ್ವರು ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇಎಸ್ ಚಕ್ರವರ್ತಿ ಅವರನ್ನು ಕಚೇರಿಗೆ ಬರದಂತೆ ನಿರ್ಬಂಧಿಸಲಾಯಿತು. ಆರ್ಬಿಎಂ ವಿಭಾಗದ ಮತ್ತೊಬ್ಬ ಅಧಿಕಾರಿ ಜಿಕೆ ಅರುಣ್ ಅವರನ್ನೂ ಮನೆಗೆ ಕಳುಹಿಸಲಾಯಿತು.
ಟಿಸಿಎಸ್ನ ಅಧಿಕಾರಿಯೊಬ್ಬರು ಈ ಬಗ್ಗೆ ಮಿಂಟ್ಗೆ ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯಿಂದ ಕಂಪನಿಯ ಹಿರಿಯ ನಾಯಕತ್ವವು ಆಘಾತಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ 3 ವರ್ಷಗಳಿಂದ ಕಂಪನಿ 3 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡಿದೆ. ಇವರಿಗೆ ಕೆಲಸ ಕೊಡಲು ಪಡೆದಿರುವ ಕಮಿಷನ್ಗಳನ್ನು ಗಣಿಸಿದರೆ 100 ಕೋಟಿ ಆಗಬಹುದು ಎಂದೂ ಒಬ್ಬ ಅಧಿಕಾರಿ ಹೇಳಿದ್ದಾಗಿ ಮಿಂಟ್ ವರದಿ ಮಾಡಿದೆ. ಆದರೆ, ಕಳೆದ 3 ವರ್ಷಗಳಿಂದ ಈ ಘಟನೆ ನಡೆಯುತ್ತಿದ್ದರೂ ಟಾಪ್ ಎಕ್ಸಿಕ್ಯೂಟಿವ್ಗಳ ಗಮನಕ್ಕೆ ಹೇಗೆ ಬಾರದೇ ಹೋಯಿತು ಎಂಬುದೂ ಸೋಜಿಗ.
ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಮಾತ್ರವೇ ಇಂಥ ಲಂಚ ಘಟನೆಗಳನ್ನು ಕಂಡು ಅಭ್ಯಾಸವಾಗಿರುವ ಜನಸಾಮಾನ್ಯರಿಗೆ ಕಾರ್ಪೊರೇಟ್ ಕಂಪನಿಯೊಳಗಿನ ಭ್ರಷ್ಟಾಚಾರ ಕಂಡು ಆಘಾತಗೊಳ್ಳುವುದರಲ್ಲಿ ಅಚ್ಚರಿ ಇಲ್ಲ.