9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಶಿಕ್ಷಣ ಸಚಿವರ ಮನವಿ

ಬೆಂಗಳೂರು (ಜೂ.22): ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಮೊಟ್ಟೆಯನ್ನು ಮಾತ್ರ ನೀಡಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿ ಆದೇಶವನ್ನು ಹೊರಡಿಸಿತ್ತು. ಇದೀಗ ಎರಡು ಮೊಟ್ಟೆ ಕೊಡಬೇಕೆಂದು ನಾನು ಮನವಿ ಮಾಡಿದ್ದೇನೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಜೊತೆಗೆ  ಈ ವ್ಯವಸ್ಥೆಯನ್ನು 9 ಮತ್ತು 10ನೇ ತರಗತಿಗೂ ವಿಸ್ತರಿಸಲು  ಚರ್ಚೆ ಮಾಡಿದ್ದೇವೆ, ಮುಖ್ಯಮಂತ್ರಿ ಅವರಿಗೂ ಮನವಿ ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಈ ಹಿಂದೆ ಇದ್ದ ಸರ್ಕಾರ  ವರ್ಷಕ್ಕೆ 42 ಬಾರಿ ಮೊಟ್ಟೆ ಕೊಡಬೇಕು ಎಂದು ಕೊಟ್ಟಿದ್ದರು. 6 ತಿಂಗಳು ಮಾತ್ರ ಬಾಕಿಯಿತ್ತು, ಕೆಲ ಶಾಲೆಗಳಲ್ಲಿ ಪ್ರಾರಂಭದಲ್ಲಿ ಒಂದೇ ಮೊಟ್ಟೆ ಕೊಟ್ಟರು. ಆ‌ಮೇಲೆ ಹೆಚ್ಚಾಗಿ ಇದ್ದ ಕಾರಣ ಎರಡು ಮೊಟ್ಟೆ ಕೊಟ್ಟರು. ಈ ಬಾರಿ ಅದು ಮುಂದುವರೆಯುತ್ತೆ. ನಾನು ಆದೇಶ ಹೊರಡಿಸಿದ್ದೇನೆ. ಒಂದೊಂದು ಮೊಟ್ಟೆ ಮೊದ್ಲು ಕೊಟ್ಟು ಬಿಡಿ ಎಂದು ಆದೇಶ ಹೊರಡಿಸಿದ್ದೇನೆ. ನಾನು ಸಿಎಂ ಅವರನ್ನು ಕೇಳಿದ್ದೇನೆ. ಹಿಂದಿನ ಸರ್ಕಾರದವರಿಗೆ ಟೈಮ್ ಕಡಿಮೆಯಿತ್ತು. ಅದಕ್ಕೆ ಎರಡು ಮೊಟ್ಟೆ ಕೊಟ್ರು. ಆದರೆ ನಿಯಮ ಇರೋದು ಒಂದು ಮೊಟ್ಟೆ ಕೊಡಲು. ಅದನ್ನು ಎರಡು ಮೊಟ್ಟೆ ಕೊಡುವುದು ಒಳ್ಳೆಯದು ಎಂದು ನಾನು ಮನವಿ ಮಾಡಿದ್ದೇನೆ. ಎಂಟನೇ ತರಗತಿಯವರೆಗೆ ಮಾತ್ರ ಮೊಟ್ಟೆ ಕೊಡುವ ವ್ಯವಸ್ಥೆಯಿತ್ತು. ಅದನ್ನು‌9-10 ತರಗತಿಗೂ ಕೊಡೋಣ ಎಂದು ಚರ್ಚೆ ಮಾಡಿದ್ದೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೂ ಮನವಿ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.

ಅಪೌಷ್ಠಿಕತೆ ನಿವಾರಣೆಗೆ ಯಶಸ್ವಿಯಾಗಿದ್ದ ಯೋಜನೆ:  ರಾಜ್ಯದಲ್ಲಿ ಅಪೌಷ್ಟಿಕತೆ, ರಕ್ತಹೀನತೆಯ (ಅನೀಮಿಯಾ) ನಿವಾರಣೆಗಾಗಿ ಮೊಟ್ಟೆ ನೀಡಲಾಗುತ್ತಿತ್ತು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಹಂಚಿಕೆ ಮಾಡಲಾಗುತ್ತಿತ್ತು. ಕಲ್ಯಾಣ ಕರ್ನಾಟಕ ವಿಭಾಗದ 08 ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್‌ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ ಯೋಜನೆ ಯಶಸ್ವಿಯಾಗಿತ್ತು. ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲೂ ಅನುಕೂಲವಾಗಿತ್ತು.