ಮತ್ತು ಬರುವ ಔಷಧಿ ನೀಡಿ ವೃದ್ಧನ ಬಳಿ ಇದ್ದ ಚಿನ್ನಾಭರಣ ಲೂಟಿ ಮಾಡಿದ ಮಹಿಳೆ

ಬೆಂಗಳೂರು: ನಗರದ ಮೆಜೆಸ್ಟಿಕ್​ನಲ್ಲಿ ಪರಿಚಯವಾಗಿದ್ದ ಮಹಿಳೆ ವೃದ್ಧರೊಬ್ಬರಿಗೆ ಮತ್ತು ಬರುವ ಔಷಧಿ ನೀಡಿ ಚಿನ್ನಾಭರಣ  ಲೂಟಿ  ಮಾಡಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಆಭರಣಗಳನ್ನು ಕಳೆದುಕೊಂಡ ವೃದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ತನಿಖೆಗೆ ಇಳಿದ ಪೊಲೀಸರಿಗೆ ದೂರು ಕೊಟ್ಟ ವೃದ್ಧನ ಮೇಲೆಯೇ ಅನುಮಾನ ವ್ಯಕ್ತವಾಗಿದೆ.

ವೃದ್ಧ ನಾಗರಾಜು ಎಂಬವರಿಗೆ ಮೆಜೆಸ್ಟಿಕ್​ನಲ್ಲಿ ಮಾಧವಿ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ಹೀಗೆ ಪರಿಚಯವಾಗಿದ್ದಾಕೆ ನಾಗರಾಜು ಜೊತೆ ಸಿನಿಮಾ ನೋಡಲೆಂದು ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್​ಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಮತ್ತು ಬರುವ ಔಷಧಿ ನೀಡಿ 3 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಸಿನಿಮಾ ಮಧ್ಯೆಯೇ ಹೊರಟು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.

ಜೂನ್ 12 ರಂದು 12.30 ಕ್ಕೆ ನಡೆದ ಘಟನೆ ಇದಾಗಿದ್ದು, ನಾಗರಾಜು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದರಂತೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ನಾಗರಾಜು ಹಾಗೂ ಮಹಿಳೆ ನಗು ನಗುತ್ತಲೆ ಮಂತ್ರಿ ಮಾಲ್​ನಿಂದ ತೆರಳಿರುವುದು ಸೆರೆಯಾಗಿದೆ. ಹೀಗಾಗಿ ನಾಗರಾಜು ನೀಡಿದ ದೂರಿನ‌ ಮೇಲೆಯೇ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವೃದ್ಧನನ್ನ ಬ್ಲಾಕ್ ಮೇಲೆ ಮಾಡಿ ಚಿನ್ನಾಭರಣ ಪಡೆದಿರುವ ಸಾಧ್ಯತೆಯೂ ಇದೆ. ಸದ್ಯ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.