ಅಪರಿಚಿತ ವಾಹನ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

ಚಿತ್ರದುರ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.

ಚಿತ್ರದುರ್ಗ ತಾಲೂಕಿನ ಗಂಜಿಗಟ್ಟೆ ಗ್ರಾಮದ ನಿವಾಸಿ ಮಹಂತೇಶ್ (30) ಮೃತ ದುರ್ದೈವಿ. ಬೆಳಗ್ಗೆ ಚಿಕ್ಕಮ್ಮನಹಳ್ಳಿಯಿಂದ ಗಂಜಿಗಟ್ಟೆ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದಿರುವ ವಾಹನ ಈತನ ಬೈಕಿಗೆ ಡಿಕ್ಕಿಯಾಗಿರುವ ಸಾಧ್ಯತೆ ಇದೆ.

ಡಿಕ್ಕಿಯಿಂದಾಗಿ ಬೈಕ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು, ಡಿಕ್ಕಿಯ ರಭಸಕ್ಕೆ ಮಹಂತೇಶನ ಮೃತದೇಹ ರಸ್ತೆಯ ಪಕ್ಕಕ್ಕೆ ಬಿದ್ದಿದೆ. ಈ ಘಟನೆ ಸಂಭವಿಸಿದ ಬಳಿಕ ಅಪರಿಚಿತ ವಾಹನದ ಚಾಲಕ ವಾಹನ ಸಮೇತವಾಗಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಎಸ್ಕೇಪ್ ಆಗಿರುವ ಚಾಲಕ ಹಾಗೂ ವಾಹನದ ಪತ್ತೆಗಾಗಿ ಬಲೆಬೀಸಿದ್ದಾರೆ.