ಹೋಟೆಲ್‌ ಮಾಣಿಯಾಗಿದ್ದೋರು IAS ಅಧಿಕಾರಿಯಾದ್ರು: 7ನೇ ಪ್ರಯತ್ನದಲ್ಲಿ ನನಸಾಯ್ತು UPSC ಕನಸು!

ನವದೆಹಲಿ (ಜೂನ್ 20, 2023): ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಯ ಕೆಲಸವು ಬಹುತೇಕರಿಗೆ ತುಂಬಾ ಆಕರ್ಷಕವಾಗಿ ಕಾಣಿಸುತ್ತದೆ. ಅದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸರಿಯಾದ ತಂತ್ರದೊಂದಿಗೆ ಸಾಕಷ್ಟು ಕಠಿಣ ಪರಿಶ್ರಮವೂ ಬೇಕಾಗುತ್ತದೆ. ಏಕೆಂದರೆ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಕಾಣಿಸಿಕೊಳ್ಳುತ್ತಾರೆ. ಆದರೆ ಸುಮಾರು ಒಂದು ಸಾವಿರ ಆಕಾಂಕ್ಷಿಗಳು ಮಾತ್ರ ಪರೀಕ್ಷೆಯ ಎಲ್ಲಾ 3 ಹಂತಗಳಲ್ಲಿ ಉನ್ನತ ಮಟ್ಟದ ಪರೀಕ್ಷೆಯನ್ನು ಭೇದಿಸಲು ಸಮರ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಯುಪಿಎಸ್‌ಸಿ ಪರೀಕ್ಷೆ ಪಾಸಾಗುವವರು ಕೇವಲ ಶ್ರೀಮಂತರಲ್ಲ. ಬಡ ಆರ್ಥಿಕ ಹಿನ್ನೆಲೆಯ ಹೊರತಾಗಿಯೂ, ಕೆಲವು UPSC ಆಕಾಂಕ್ಷಿಗಳು ಪರೀಕ್ಷೆಗೆ ತಯಾರಿ ಮುಂದುವರೆಸುತ್ತಾರೆ ಮತ್ತು ಯಶಸ್ವಿಯಾಗಿ IAS, IPS ಅಥವಾ IFS ಅಧಿಕಾರಿಗಳಾಗುತ್ತಾರೆ. ಈ ಪೈಕಿ, ನಾವು ಹೇಳಲು ಹೊರಟಿರುವ ಸ್ಟೋರಿಯೂ ಒಂದು. 

ಕೆ. ಜಯಗಣೇಶ್‌ ಎಂಬ ಐಎಎಸ್‌ ಅಧಿಕಾರಿ ಮೊದಲು ಚಿತ್ರಮಂದಿರದಲ್ಲಿ ಕೆಲಸ ಮಾಡಿದ್ದಾರೆ ಹಾಗೂ, ಹೋಟೆಲ್‌ನಲ್ಲಿ ಮಾಣಿಯೂ ಆಗಿದ್ದರು. ಆದರೆ, ತಮ್ಮ ಐಎಎಸ್‌ ಕನಸನ್ನು ಬಿಟ್ಟುಕೊಡದ ಅವರು, ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ. 6 ಬಾರಿ ಅನುತ್ತೀರ್ಣರಾದರೂ 7ನೇ ಬಾರಿ ನಡೆದ ಪರೀಕ್ಷೆಯಲ್ಲಿ ಇವರು  UPSC CSE ಅನ್ನು ಪಾಸಾಗಿದ್ದಾರೆ. 

ಕೆ. ಜಯಗಣೇಶ್ ಅವರು 2008 ರಲ್ಲಿ UPSC ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿ (AIR) 156 ರೊಂದಿಗೆ ಐಎಎಸ್ ಅಧಿಕಾರಿಯಾದರು. ಆದರೆ ಇದಕ್ಕೂ ಮುನ್ನ 6 ಬಾರಿ ವಿಫಲರಾಗಿದ್ದರು. ಅವರು ತಮ್ಮ ಕೊನೆಯ ಮತ್ತು ಏಳನೇ ಪ್ರಯತ್ನದಲ್ಲಿ ಪರೀಕ್ಷೆಯನ್ನು ಪಾಸ್‌ ಮಾಡಿಕೊಂಡರು. ತಂದೆ ಫ್ಯಾಕ್ಟರಿಯೊಂದರಲ್ಲಿ ಕೆಲಸಗಾರರಾಗಿದ್ದ ಕಾರಣ ಅವರಿಗೆ ಉತ್ತಮ ಆರ್ಥಿಕ ಹಿನ್ನೆಲೆ ಇರಲಿಲ್ಲ. ಈ ಹಿನ್ನೆಲೆ ಯುಪಿಎಸ್‌ಸಿ ಜರ್ನಿ ಸಮಯದಲ್ಲಿ ಜಯಗಣೇಶ್ ಕಷ್ಟಗಳನ್ನು ಎದುರಿಸಿದರು.  ಆದರೂ, ಅವರು ಎಂದಿಗೂ ತಮ್ಮ ಕನಸನ್ನು ನನಸು ಮಾಡುವವರೆಗೆ ಸುಮ್ಮನೆ ಇರಲಿಲ್ಲ.

ಇನ್ನು, 7ನೇ ಬಾರಿ ಹಾಗೂ ಕೊನೆಯ ಪ್ರಯತ್ನಕ್ಕೆ ತಯಾರಿ ನಡೆಸುತ್ತಿರುವಾಗ ಅವರು ಗುಪ್ತಚರ ಬ್ಯೂರೋ (IB) ಗೆ ಆಯ್ಕೆಯಾಗಿದ್ದರು.. ಆಗ ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೋ ಅಥವಾ ಐಬಿಗೆ ಸೇರಬೇಕೋ ಎಂದು ನಿರ್ಧರಿಸುವುದು ಅವರಿಗೆ ಕಷ್ಟಕರವಾಗಿತ್ತು. ಆದರೆ ಅವರು ಮತ್ತೊಮ್ಮೆ UPSC ಪರೀಕ್ಷೆಗೆ ಹಾಜರಾಗಿ, 2008 ರಲ್ಲಿ ಇದನ್ನು ಭೇದಿಸಿದರು.

ಜಯಗಣೇಶ್‌ ಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು. ನಂತರ ಪಾಲಿಟೆಕ್ನಿಕ್ ಹಾಗೂ ತಂತಿ ಪೆರಿಯಾರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದಿದ್ದರು. ಆದರೂ, ಇವರಿಗೆ ಉತ್ತಮ ಉದ್ಯೋಗ ಸಿಗದ ಕಾರಣ, ಚಿತ್ರಮಂದಿರದಲ್ಲಿ ಬಿಲ್ಲಿಂಗ್ ಕ್ಲರ್ಕ್ ಆಗಿ ಕೆಲಸ ಮಾಡಲು ನಿರ್ಧರಿಸಿದರು. ಬಳಿಕ, ಹೋಟೆಲ್ ಒಂದರಲ್ಲಿ ಮಾಣಿಯಾಗಿಯೂ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು, ಈ ಕೆಲಸಗಳನ್ನು ಮಾಡುವುದರಿಂದಯೂ ಜಯಗಣೇಶನ್‌ ಅವರಿಗೆ ಹೆಚ್ಚು ಹಣ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಕಡಿಮೆ ಸಂಬಳದಲ್ಲಿ ಕುಟುಂಬದ ಖರ್ಚುಗಳನ್ನು ಭರಿಸುವುದು ಕಷ್ಟ ಎಂದೂ ಅವರು ಅರಿತುಕೊಂಡರು. ಇನ್ನೊಂದೆಡೆ ಐಎಎಸ್ ಅಧಿಕಾರಿಯಾಗುವ ಆಸೆಯೂ ಇತ್ತು. ಹೀಗಾಗಿ ಕೆಲಸ ಬಿಟ್ಟು ತಮ್ಮ ಕನಸುಗಳ ಈಡೇರಿಕೆಗೆ ಮುಂದಾಗಿದ ಅವರು ಕೊನೆಗೂ ಐಎಎಸ್ ಅಧಿಕಾರಿಯಾದರು.