ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

ದಾವಣಗೆರೆ: ಕಾಣೆಯಾಗಿದ್ದ ಮಹಿಳೆಯೊಬ್ಬರ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಿಟ್ಟೂರು ಗ್ರಾಮದ ಕವಿತಾ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ. ಈಕೆ ವಿವಾಹಿತೆಯಾಗಿದ್ದು, ಕುಂಚೂರು ಗ್ರಾಮದ ಸಲೀಂ ಮುನ್ನಾಖಾನ್ ಎಂಬಾತನ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಕಳೆದ ಫೆಬ್ರವರಿ 23ರಂದು ಕವಿತಾ ಹಾಗೂ ಸಲೀಂ ನಡುವೆ ಜಗಳ ನಡೆದಿತ್ತು. ಬಳಿಕ ಸಲೀಂ ಕವಿತಾಳನ್ನು ಬೈಕಿನಲ್ಲಿ ಕೂರಿಸಿಕೊಂಡು ಕುಂಚೂರು ಕೆರೆಯ ನಿರ್ಜನ ಪ್ರದೇಶಕ್ಕೆ ತೆರಳಿದ್ದ.

ನಿರ್ಜನ ಪ್ರದೇಶಕ್ಕೆ ಕವಿತಾಳನ್ನು ಕರೆದೊಯ್ದ ಸಲೀಂ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಅಲ್ಲಿಯೇ ಸುಟ್ಟು ಹಾಕಿದ್ದಾನೆ. ಇತ್ತ ಕವಿತಾಳ ಮನೆಯವರು ಆಕೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

ಕೊಲೆ ಆರೋಪಿಯಾದ ಸಲೀಂ ಕವಿತಾಳ ಕೊಲೆ ವಿಚಾರವನ್ನು ತನ್ನ ಸ್ನೇಹಿತನ ಬಳಿ ಹೇಳಿಕೊಂಡಿದ್ದ ಹಿನ್ನೆಲೆ ಪ್ರಕರಣ ಬಯಲಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಈ ಕುರಿತು ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.