ಬೆಂಗಳೂರಿನಲ್ಲಿ ಸರಣಿ ಅಪಘಾತಕ್ಕೆ ವ್ಯಕ್ತಿ ಸಾವು, ಮತ್ತೊಂದೆಡೆ ದೇವರ ಕೋಣ ದಾಳಿಗೆ ರೈತ ಬಲಿ

ನೆಲಮಂಗಲ: ಬೆಂಗಳೂರಿನ 8ನೇ ಮೈಲಿ ಜಂಕ್ಷನ್‌ನ ಹೆಸರುಘಟ್ಟ ರಸ್ತೆಯಲ್ಲಿ ತಡರಾತ್ರಿ ಭೀಕರ ಸರಣಿ ಅಪಘಾತ ನಡೆದಿದೆ. ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು ಮೂವರಿಗೆ ಗಾಯಗಳಾಗಿವೆ. ಕಾರು ಚಾಲಕ ಪ್ರಖ್ಯಾತ್​​​ ಚಿನ್ನಪ್ಪ(22) ಸ್ಥಳದಲ್ಲೇ ಮೃತಪಟ್ಟಿದ್ದು ಕಾರಿನಲ್ಲಿದ್ದ ನಟರಾಜ್, ರಿಕ್ಕಿತ್, ಬಸವಗೌಡ ಎಂಬುವವರಿಗೆ ಗಾಯಗಳಾಗಿವೆ.

ಒಂದು ಬೈಕ್​​, ಎರಡು ಕಾರಿಗೆ ಹೊಂಡಾ ಕಾರು ಗುದ್ದಿದೆ. ಅಪಘಾತದಲ್ಲಿ ಒಂದು ಬೈಕ್​​, ಮೂರು ಕಾರುಗಳು ಜಖಂ ಆಗಿವೆ. ಮಾರಾಟ ಮಳಿಗೆಯ ಗೃಹಪಯೋಗಿ ವಸ್ತುಗಳು ಧ್ವಂಸವಾಗಿದ್ದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಸರಣಿ ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದೇವರ ಕೋಣ ದಾಳಿಗೆ ರೈತ ಸಾವು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಎನ್​​.ಬಸವನಹಳ್ಳಿ ಗ್ರಾಮದಲ್ಲಿ ದೇವರ ಕೋಣ ದಾಳಿಗೆ ರೈತ ಬಲಿಯಾದ ಘಟನೆ ನಡೆದಿದೆ. ಜಯಣ್ಣ(48) ಮೃತ ದುರ್ದೈವಿ. ಬಸವನಹಳ್ಳಿ ಜಮೀನಿನಲ್ಲಿ ಜಯಣ್ಣನ ಮೇಲೆ ಲಿಂಗದಹಳ್ಳಿಯ ಉಡಸನಾಂಭ ದೇವಿಗೆ ಬಿಟ್ಟ ದೇವರ ಕೋಣ ದಾಳಿ ಮಾಡಿದೆ. ಜಯಣ್ಣ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು ಪಕ್ಕದ ಹಳ್ಳಿಯ ಪ್ರಮುಖರ ವಿರುದ್ಧ ಸೂಕ್ತ ಕ್ರಮ‌ ಹಾಗೂ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಕಳೆದ 4 ವರ್ಷದಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಕೋಣದ ಉಪಟಳ ಹೆಚ್ಚಾಗಿದೆ. ಈ ಬಗ್ಗೆ ತಿಳಿಸಿದರೂ ಲಿಂಗದಹಳ್ಳಿ ಗ್ರಾಮಸ್ಥರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಲಿಂಗದಹಳ್ಳಿ ಗ್ರಾಮಸ್ಥರ ವಿರುದ್ಧ ಕ್ರಮಕ್ಕೆ ಜಯಣ್ಣ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.