ಅರಣ್ಯ ಇಲಾಖೆ ಪೊಲೀಸ್ ಎಂದು ಹೇಳಿಕೊಂಡು ಹಣ ವಸೂಲಿ; ಆರೋಪಿ ಬಂಧನ

ಕೊಪ್ಪಳ: ಅರಣ್ಯ ಇಲಾಖೆ ಪೊಲೀಸ್(Police)​ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯ್ ಬಂಧಿತ ಆರೋಪಿ. ಗದಗ ಜಿಲ್ಲೆಯ ಗಂಗಾಪುರಪೇಟೆಯ ನಿವಾಸಿಯಾದ ಆರೋಪಿ ಸಂಜಯ್ ಮೇ 25ರಂದು ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬೈಕ್ ಸವಾರ ಬೊಚನಹಳ್ಳಿಯ ಹನುಮೇಶ್ ಬಳಿ ಹಣ ವಸೂಲಿ ಮಾಡಿದ್ದ. ಗಂಧದ ಕಟ್ಟಿಗೆ ಕಳವುವಾಗಿದೆ, ನಿಮ್ಮ ಮೇಲೆ ಅನುಮಾನವಿದೆ ಎಂದಿದ್ದ ಸಂಜಯ್​ ಹನುಮೇಶ್​ ಬಳಿ 49,000 ನಗದು, 2 ಚಿನ್ನದ ಉಂಗುರ ದೋಚಿದ್ದನು. ಈ ಕುರಿತು ಹನುಮೇಶ್ ಅನುಮಾನ ಬಂದು ಗ್ರಾಮೀಣ ಠಾಣೆಗೆ ದೂರು ನೀಡಿದ್ದನು. ಇದೀಗ ಬೈಕ್ ಸವಾರ ಹನುಮೇಶ್ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ.