ಶಿವಮೊಗ್ಗ: ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ

ಶಿವಮೊಗ್ಗ(ಜೂ.18):  ಜಿಲ್ಲೆಯ ಹೊಸನಗರ ತಾಲೂಕಿನ ಶರಾವತಿ ಹಿನ್ನೀರು ಭೂ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಅಡ್ಡೆಗಳ ಮೇಲೆ ಗಣಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಮರಳು ವಶಕ್ಕೆ ಪಡೆದಿದೆ. ಶರಾವತಿ ಹಿನ್ನೀರು ಭಾಗದಲ್ಲಿ ಅಕ್ರಮ ಮರಳು ಸಾಗಣಿ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧಿಡೀರ್ ದಾಳಿ ಮಾಡಿ ನೂರಾರು ಲೋಡ್ ಅಕ್ರಮ ಮರಳನ್ನು ವಶಕ್ಕೆ ಪಡೆದಿದ್ದಾರೆ. 

ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪ, ಸಣ್ಣ ಎರಗಿ, ಮಣಸಟ್ಟೆ, ಎಚ್‌.ಹೊನ್ನೆಕೊಪ್ಪ ಸುತ್ತಮುತ್ತ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಲೋಡ್ ಮರಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ. ಜೆಸಿಬಿ ಯಂತ್ರ ಬಳಸಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಸಾವಿರಾರು ಲೋಡ್ ಮರಳು ಅಕ್ರಮ ಸಂಗ್ರಹವಾಗಿದೆ. ಅಹೋರಾತ್ರಿ ಮರಳು ಸಾಗಣೆ ನಿರಂತರವಾಗಿ ನಡೆದಿದೆ. ಈ ಬಗ್ಗೆ ಟಾಸ್ಕ್‌ಪೋರ್ಸ್‌ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಅರಣ್ಯ ಹಾಗೂ ಖನಿಜ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟವಾಗುತ್ತಿದೆ. ಕೂಡಲೆ ಕ್ರಮಕೈಗೊಳ್ಳಿ ಎಂದು ಜನ ಸಂಗ್ರಾಮ ಪರಿಷತ್ ಸದಸ್ಯ ಗಿರೀಶ್ ಆಚಾರ್‌ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಹೊಸನಗರ ಹಾಗೂ ಸಾಗರ ತಾಲೂಕಿನಲ್ಲಿ ಪ್ರಾಕೃತಿಕ ಸಂಪತ್ತು ನಿರಂತರ ಲೂಟಿ ಆಗುತ್ತಿದೆ. ಕಲ್ಲು, ಮರಳು, ಜೆಲ್ಲಿ ಸೇರಿದಂತೆ ನೈಸರ್ಗಿಕ ಸಂಪತ್ತು ಅಹೋರಾತ್ರಿ ಅಕ್ರಮ ಸಾಗಣಿ ನಡೆದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಅವರು ಮೌನಕ್ಕೆ ಶರಣಾಗಿದ್ದಾರೆ. ಟಾಸ್ ಪೋರ್ಸ್ ಸಮಿತಿ ಅಕ್ರಮ ದಂಧೆಕೋರರಿಗೆ ಬೆನ್ನೆಲುಬಾಗಿ ನಿಂತಂತೆ ತೋರುತ್ತಿದೆ ಎಂದು ಗಿರೀಶ್ ಆಚಾರ್ ದೂರಿದರು.

ದೂರಿನನ್ವಯ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು ಕಂದಾಯ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ವಿಜ್ಞಾನಿ ಮಾನಸಾ, ಕಂದಾಯ ಇಲಾಖೆಯ ಗಾಮ ಲೆಕ್ಕಿಗ ಕೌಶಿಕ್, ಗ್ರಾಮ ಸಹಾಯಕಿ ದೀಪಾ, ಮಂಜುನಾಥ್‌ ಹಾಗೂ ದೂರುದಾರ ಗಿರೀಶ್ ಆಚಾರ್ ಇದ್ದರು.