ಕರ್ನಾಟಕದ ಶಾಲಾ ಪಠ್ಯಕ್ರಮದಿಂದ ಸಾವರ್ಕರ್, ಹೆಡ್ಗೆವಾರ್ ಪಠ್ಯಕ್ಕೆ ಕೊಕ್; ಈಗ ನಿಮ್ಮ ಸಿದ್ಧಾಂತ ಎಲ್ಲಿ ಹೋಯ್ತು?: ಉದ್ಧವ್ ಠಾಕ್ರೆ ವಿರುದ್ಧ ಫಡ್ನವೀಸ್ ವಾಗ್ದಾಳಿ

ದೆಹಲಿ: ಕರ್ನಾಟಕದ ಶಾಲಾ ಪಠ್ಯಕ್ರಮದಿಂದ  Savarkar ಮತ್ತು ಹೆಡ್ಗೆವಾರ್ ಕುರಿತ ಪಠ್ಯ ತೆಗೆದುಹಾಕಿರುವ ಕಾಂಗ್ರೆಸ್ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಜಿ ಮಿತ್ರಪಕ್ಷ, ಶಿವಸೇನಾ (UBT) ನಾಯಕ ಉದ್ಧವ್ ಠಾಕ್ರೆಯನ್ನು   ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಶಿವಸೇನಾ ನಾಯಕ ಠಾಕ್ರೆ, ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದು, ಸಾವರ್ಕರ್ ನಮಗೆ ರೋಲ್ ಮಾಡೆಲ್. ಅವರಿಗೆ ಮಾಡುವ ಅವಮಾನವು ದೇವರಿಗೆ ಮಾಡುವ ಅವಮಾನಕ್ಕೆ ಸಮಾನ ಎಂದು ಹೇಳಿದ್ದರು. ಸಾವರ್ಕರ್​​​ನ್ನು ಅವಮಾನಿಸುವುದನ್ನು ಸಹಿಸಿಕೊಳ್ಳುವುದಿಲ್ಲ. ಸಾವರ್ಕರ್ ಅವರನ್ನು ಕೀಳಾಗಿಸಿದರೆ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ ಎಂದು ಠಾಕ್ರೆ ಎಚ್ಚರಿಸಿದ್ದರು. ಇದನ್ನು ಉಲ್ಲೇಖಿಸಿರುವ ಫಡ್ನವೀಸ್, ಉದ್ಧವ್ ಠಾಕ್ರೆ ಅವರು ಅಧಿಕಾರದಲ್ಲಿರುವುದಕ್ಕಾಗಿ ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ನೀವು ಪುಸ್ತಕದಿಂದ ಹೆಸರನ್ನು ಅಳಿಸಬಹುದು, ಆದರೆ ಅದನ್ನು ಹೃದಯದಿಂದ ಅಳಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನೀವು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಾನು ಉದ್ಧವ್ ಠಾಕ್ರೆ ಅವರನ್ನು ಕೇಳುತ್ತೇನೆ. ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್‌ಗೆ ಹೆಗಲಿಗೆ ಹೆಗಲು ಕೊಟ್ಟು ಕೂತಿರುವವರೇ, ಈಗ ನಿಮ್ಮ ಪ್ರತಿಕ್ರಿಯೆ ಏನು? ಅಧಿಕಾರಕ್ಕಾಗಿ ಮಾತ್ರ ಅಲ್ಪಸಂಖ್ಯಾತ ಸಮುದಾಯಗಳ ಓಲೈಕೆ ನಡೆಯುವುದನ್ನು ನೀವು ಒಪ್ಪಿಕೊಳ್ಳುತ್ತೀರಾ, ವೀರ ಸಾವರ್ಕರ್ ಅವರ ಈ ಅವಮಾನವನ್ನು ಒಪ್ಪಿಕೊಳ್ಳುತ್ತೀರಾ?ಅಥವಾ ಕುರ್ಚಿಗಾಗಿ ಸುಮ್ಮನಾಗುತ್ತೀರಾ?

ನನ್ನ ಪ್ರಶ್ನೆ ಉದ್ಧವ್ ಠಾಕ್ರೆ ಅವರಿಗೆ. ಈಗ ನಿಮ್ಮ ಪ್ರತಿಕ್ರಿಯೆ ಏನು ಎಂದು ನಿಖರವಾಗಿ ಹೇಳಿ. ನೀವು ಯಾರ ಮಡಿಲಲ್ಲಿ ಕುಳಿತಿದ್ದೀರೋ ಅವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ಹೆಸರನ್ನು ಅಳಿಸಲು ಹೊರಟಿದ್ದಾರೆ. ಮತಾಂತರವನ್ನು ಸಂಪೂರ್ಣವಾಗಿ ಬೆಂಬಲಿಸಲು ಹೊರಟಿದ್ದಾರೆ. ಈ ಬಗ್ಗೆ ನಿಮ್ಮ ನಿಖರವಾದ ಅಭಿಪ್ರಾಯವನ್ನು ಈಗ ನೀವೇ ಹೇಳಬೇಕು. ಅಧಿಕಾರಕ್ಕಾಗಿ ಈ ರಾಜಿ ಮಾಡಿಕೊಳ್ಳಲಾಗಿದೆಯೇ? ಎಂದು ಫಡ್ನವೀಸ್ ಕೇಳಿದ್ದಾರೆ.