ತುಮಕೂರು: ಚಿರತೆ ದಾಳಿಗೆ ಬೆಚ್ಚುತ್ತಿದ್ದಾರೆ ಕುರಿಗಾಯಿಗಳು!

ತುಮಕೂರು (ಜೂ.16) ಕಲ್ಪತರು ಜಿಲ್ಲೆಯಲ್ಲಿ ಚಿರತೆ ಕಾಟ ತಪ್ಪಿದೆ ಎನ್ನುವಷ್ಟರಲ್ಲಿ ಮತ್ತೆ ಸಮಸ್ಯೆ ಶುರುವಾಗಿದ್ದು ಈಗ ಕುರಿಗಾಯಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ವರ್ಷದ 6 ತಿಂಗಳು ಮೇವಿಗಾಗಿ ಶಿರಾ, ಹಿರಿಯೂರು, ಮಡಕಶಿರಾ, ಚಳ್ಳಕೆರೆ ಮುಂತಾದ ಕಡೆಯಿಂದ ಕುರಿ ಮಂದೆ ಹೊಡಕೊಂಡು ಊರೂರು ಅಲೆಯುವ ಕುರಿಗಾಯಿಗಳು ವಾಪಸ್‌ ತಮ್ಮ ಗ್ರಾಮಗಳಿಗೆ ಹೋಗುತ್ತಿರುವ ವೇಳೆ ದಿಢೀರ್‌ ಎಂದು ಪ್ರತ್ಯಕ್ಷವಾಗುವ ಚಿರತೆ ಕುರಿಯನ್ನು ಹೊತ್ತೊಯ್ಯುತ್ತಿದೆ.

ಸಾಮಾನ್ಯವಾಗಿ ನವೆಂಬರ್‌ ತಿಂಗಳಲ್ಲಿ 50 ರಿಂದ 60 ಕೆಲವೊಮ್ಮೆ ನೂರು ಕುರಿಗಳು ಜೊತೆಗೆ ಪಾತ್ರೆ ಮತ್ತಿತರೆ ವಸ್ತುಗಳನ್ನು ಕತ್ತೆಗಳ ಮೇರೆ ಹೇರಿಕೊಂಡು ಕುರಿ ಮೇಯಿಸಿಕೊಂಡು ಹೋಗುವುದು ವಾಡಿಕೆ. ವಾಪಸ್‌ ಮುಂಗಾರು ಮಳೆ ಆರಂಭವಾಗುವ ಜೂನ್‌ ತಿಂಗಳಿನಲ್ಲಿ ತಮ್ಮ ಗ್ರಾಮಗಳಿಗೆ ಬರುತ್ತಾರೆ. 6 ತಿಂಗಳು ಜೋಪಾನ ಮಾಡಿಕೊಂಡು ಕುರಿ ಮೇಯಿಸಿ ವಾಪಸ್‌ ಬರುವಾಗ ಕೊರಟಗೆರೆ, ಮಧುಗಿರಿ ಭಾಗದಲ್ಲಿ ದಿಢೀರ್‌ ಎಂದು ಪ್ರತ್ಯಕ್ಷವಾಗುವ ಚಿರತೆ ಕುರಿಯನ್ನು ಹೊತ್ತೊಯ್ಯುತ್ತಿವೆ.

ಮಂಡ್ಯ, ಮಳವಳ್ಳಿ ಕಡೆ ಕುರಿ ಮೇಯಿಸಿಕೊಂಡು ಹೋಗಿ ವಾಪಸ್‌ ಬರುವಾಗ ಚನ್ನರಾಯನದುರ್ಗ ಬಳಿ ದಿಢೀರ್‌ ಎಂದು ಪ್ರತ್ಯಕ್ಷವಾದ ಚಿರತೆ ವೆಂಕಜ್ಜಿ ಎಂಬಾಕೆಯ ಕುರಿಯನ್ನು ಹೊತ್ತೊಯ್ದಿದೆ. ಮೂರು ದಿವಸಗಳ ಹಿಂದೆಯಷ್ಟೆಪಕ್ಕದ ಹಳ್ಳಿಯೊಂದರಲ್ಲಿ ಚಿರತೆ ಎದುರಾಗಿದೆ. ಆದರೆ ಜನರು ಹೆಚ್ಚಾಗಿದ್ದರಿಂದ ಹಾಗೆ ಹೋಗಿದ್ದಾಗಿ ತಿಳಿಸಿದಳು. ಇನ್ನು ನಮ್ಮ ಊರು ತಲುಪಲು ಕನಿಷ್ಠ ಒಂದು ವಾರವಾದರೂ ಬೇಕು. ಅಷ್ಟರಲ್ಲಿ ಮತ್ತೆ ದಾಳಿ ಮಾಡಿದರೆ ಗತಿ ಏನು ಎಂಬ ಪ್ರಶ್ನೆ ಈಕೆಯದ್ದು. ವಾರದ ಹಿಂದೆಯಷ್ಟೆಈಕೆ ಗ್ರಾಮದವರೊಬ್ಬರ ಕುರಿಯನ್ನು ಚಿರತೆ ಹೊತ್ತೊಯ್ದಿದೆ. ಸಾಮಾನ್ಯವಾಗಿ ಕಾಡಿನಿಂದ ನಾಡಿಗೆ ನುಗ್ಗಿ ಕರುವನ್ನು, ಮೇಕೆ, ಕುರಿಯನ್ನು ಹೊತ್ತೊಯ್ಯುವುದು ಮನೆ ಮಾಲಿಕರು ದೂರು ನೀಡುವ ಮೂಲಕ ಪ್ರಕರಣ ಬೆಳಕಿಗೆ ಬರುತ್ತದೆ. ಆದರೆ ಕುರಿಗಾಯಿಗಳು ಮೂಲತಃ ಅಲೆಮಾರಿಗಳಾಗಿದ್ದರಿಂದ ಪೊಲೀಸ್‌ ಸ್ಟೇಷನ್‌ಗಾಗಲಿ, ಅರಣ್ಯ ಇಲಾಖೆಗೆ ದೂರು ನೀಡುವ ಗೋಜಿಗೆ ಹೋಗದೆ ತಮ್ಮ ಊರಿನತ್ತ ಮುಖ ಮಾಡುತ್ತಿದ್ದಾರೆ.

ಕಳೆದ 6 ತಿಂಗಳಿನಿಂದ ಕುರಿ ಮೇಯಿಸಿಕೊಂಡು ಊರೂರು ತಿರುಗಿ ವಾಪಸ್‌ ಕುರಿ ಮಂದೆ ಜೊತೆಗೆ ತಮ್ಮ ಗ್ರಾಮಗಳಿಗೆ ತೆರಳುವ ಈ ಕುರಿಗಾಯಿಗಳು ಈಗ ದಿಢೀರ್‌ ಎಂದು ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಚಿರತೆ ಕಾಟ ಇಂದು ನಿನ್ನೆಯದ್ದಲ್ಲ, ನರಹಂತಕ ಚಿರತೆಗಳು ಕೂಡ ಇದ್ದು ಐದು ಮಂದಿಯನ್ನು ಬಲೆ ಪಡೆದಿತ್ತು. ಕಾಡುಗಳಲ್ಲಿ ಜಿಂಕೆ ಮತ್ತಿತರೆ ಪ್ರಾಣಿಗಳು ಬೇಟೆಗೆ ಸಿಗದೇ ಇರುವುದರಿಂದ ಹಾಗೂ ಕಲ್ಲು ಗಣಿಗಾರಿಕೆಯಿಂದ ನೀರಿನ ಸೆಲೆಗಳು ಬತ್ತು ಹೋಗಿರುವುದರಿಂದ ಅನಿವಾರ್ಯವಾಗಿ ನಾಡಿನತ್ತ ಮುಖ ಮಾಡುತ್ತಿದೆ. ಅಲ್ಲದೇ ಬೆಂಗಳೂರಿನವರು ಭವಿಷ್ಯಕ್ಕಿರಲಿ ಎಂಬ ಕಾರಣಕ್ಕೆ ಜಮೀನುಗಳನ್ನು ಖರೀದಿಸಿದ್ದಾರೆ. ಕೃಷಿ ಮಾಡದೇ ಇದ್ದುದ್ದರಿಂದ ಬೃಹತಾಕಾರದ ಬೇಲಿಗಳು ಬೆಳೆದು ಬಿಟ್ಟಿವೆ. ಈ ಬೇಲಿಗಳಲ್ಲಿ ಅಡಗಿಕೊಳ್ಳುವ ಚಿರತೆಗಳು ನಾಯಿ, ಕುರಿ, ಕರುಗಳ ಮೇಲೆ ದಾಳಿ ಮಾಡುತ್ತಿವೆ. ಚಿರತೆ ಕಾಟ ಮಿತಿ ಮೀರಿದ್ದರ ಪರಿಣಾಮ ನಾಗರಹೊಳೆಯಿಂದ ಆನೆಗಳನ್ನು ಕರೆಸಿ ಅದರ ಸಹಾಯದಿಂದ ಚಿರತೆ ಹಿಡಿಯಲು ಕಸರತ್ತು ಮಾಡಿದ್ದರು. ಕಡೆಗೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಚಿರತೆಯನ್ನು ಹಿಡಿದಿದ್ದರಿಂದ ಜನ ನಿಟ್ಟುಸಿರು ಬಿಟ್ಟರು. ಈಗ ಮತ್ತೆ ಚಿರತೆ ಕಾಟ ಕಾಣಿಸಿಕೊಂಡಿದ್ದು ತಮ್ಮ ಗ್ರಾಮಗಳಿಗೆ ತೆರಳುತ್ತಿರುವ ಕುರಿಗಾಯಿಗಳು ತಮ್ಮ ಕುರಿಮಂದೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಚಿಂತೆಯಲ್ಲಿದ್ದಾರೆ.