ಬಾಲಕನನ್ನು ಬಲಿ ಪಡೆದ ಮೊಸಳೆ; ಮೊಸಳೆಯನ್ನು ಹಿಂಸಿಸಿ ಕೊಂದ ಜನ

ಪಾಟ್ನಾ: 14 ವರ್ಷದ ಬಾಲಕನನ್ನು ಮೋಸಳೆಯೊಂದು ಬಲಿ  ಪಡೆದಿದೆ. ಆಕ್ರೋಶಗೊಂಡ ಸ್ಥಳೀಯರು ಮೊಸಳೆಯನ್ನು ಮೀನಿನ ಬಲೆಯಲ್ಲಿ ಹಿಡಿದು ತಂದು ಹೊಡೆದು ಬಡಿದು ಹಿಂಸಿಸಿ ಕೊಂದಿರುವ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಅಂಕಿತ್​​ ಕುಮಾರ್​​(14) ಎಂಬ ಬಾಲಕ ಹಾಗೂ ಆತನ ಪೋಷಕರು ಹೊಸ ವಾಹನ ಖರೀದಿಸಿದ ಖುಷಿಯಲ್ಲಿ ವಾಹನಕ್ಕೆ ಪೂಜೆ ಸಲ್ಲಿಸಲು ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದ ಖಾಲ್ಸಾ ಘಾಟ್‌ಗೆ ಬಂದಿದ್ದಾರೆ. ಈ ಸಮಯದಲ್ಲಿ ಗಂಗಾ ನದಿಯಿಂದ ನೀರು ತರಲು ಪುಟ್ಟ ಬಾಲಕ ನೀರಿಗೆ ಇಳಿದಿದ್ದಾನೆ. ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿದ್ದ ಮೊಸಳೆಯೊಂದು ಪುಟ್ಟ ಬಾಲಕನನ್ನು ಬಲಿ ಪಡೆದುಕೊಂಡಿದೆ.

ಬಾಲಕನ ಕಿರುಚಾಟ ಕೇಳಿ ಪಾಲಕರ ಭಯ ಬಿದ್ದಿದ್ದಾರೆ. ಕುಟುಂಬಸ್ಥರು ಅಂಕಿತ್​ನನ್ನು ರಕ್ಷಿಸಲು ಯತ್ನಿಸಿದರಾದರೂ ಮೊಸಳೆ ದಾಳಿಯಿಂದ ಸಾವನ್ನಪ್ಪಿದ್ದಾನೆ. ಒಂದು ಗಂಟೆಯ ನಂತರ ಗಂಗಾ ನದಿಯಿಂದ ಬಾಲಕನ ಅವಶೇಷಗಳನ್ನು ಹೊರತೆಗೆಯಲಾಗಿದೆ. ಆದರೆ ಆಕ್ರೋಶಗೊಂಡ ಸ್ಥಳೀಯರು ಮೀನು ಹಿಡಿಯುವ ಬಲೆಯಿಂದ ಮೊಸಳೆಯನ್ನು ಹಿಡಿದು ದಡಕ್ಕೆ ತಂದು ದೊಣ್ಣೆ ಮತ್ತು ರಾಡ್‌ಗಳಿಂದ ಬರ್ಬರವಾಗಿ ಹೊಡೆದು ಸಾಯಿಸಿಬಿಟ್ಟಿದ್ದಾರೆ. ಮೊಸಳೆಯನ್ನು ಹಿಂಸಿಸಿ ಕೊಂದಿರುವ ದೃಶ್ಯಗಳು ಮೊಬೈಲ್​​​ನಲ್ಲಿ ಸೆರೆಹಿಡಿಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.