ಲೋಕಸಭೆ ಚುನಾವಣೆವರೆಗೆ ಗುದ್ದಾಡಿ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಾರೆ: ರಮೇಶ್ ಜಾರಕಿಹೊಳಿ

ಬೆಳಗಾವಿ:  ಲೋಕಸಭೆ ಚುನಾವಣೆವರೆಗೆ ಮಾತ್ರ ಗುದ್ದಾಡಿಕೊಂಡು ಐದು ಗ್ಯಾರಂಟಿ  ಯೋಜನೆಗಳನ್ನು ಮುಂದುವರಿಸುತ್ತಾರೆ. ನಂತರ ಕಾಂಗ್ರೆಸ್​​ನವರು ಜನರಿಗೆ ಮೋಸ ಮಾಡುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಹೇಳಿದ್ದಾರೆ. ಜಿಲ್ಲೆಯ ಅಥಣಿಯಲ್ಲಿ ಕಾರ್ಯಕರ್ತರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಮುಂದುವರಿಸಿದರೆ ಅಭಿವೃದ್ಧಿಕಾರ್ಯ ಬಂದ್ ಮಾಡಬೇಕಾಗುತ್ತದೆ. ಇದರಿಂದ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

ನಾವು ಯಾರೂ ಗ್ಯಾರಂಟಿಗಳ ಬಗ್ಗೆ ಮಾತನಾಡಬಾರದು ಎಂದು ಬಿಜೆಪಿ ಮುಖಂಡರು, ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ, ಜನ ಮತ ಹಾಕಿದ್ದಾರೆ, ಅವರಿಗೂ ಇದೆ, ನಮಗೂ ಇದೆ. ಆಮೇಲೆ ತಪ್ಪು ಮಾಡಿದರೆ ಮಾತಾಡೋಣ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಎರಡು ಸ್ಥಾನಕ್ಕೆ ಸೀಮಿತ ಮಾಡುತ್ತೇವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಆಗಲಿ ಆಗಲಿ ಬಹಳ ಸಂತೋಷ ಬಹಳ ಸಂತೋಷ ಎಂದರು.

ಕಾಗವಾಡ, ಅಥಣಿ ಭಾಗದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಸಭೆಯಲ್ಲಿ ಹೇಳಿದ ರಮೇಶ್ ಜಾರಕಿಹೊಳಿ, ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಾಗಿ ಪಕ್ಷ ಸಂಘಟನೆ ಮಾಡಲು ಕಾಗವಾಡ, ಅಥಣಿ ಭಾಗದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತೇವೆ. ಮತ್ತೆ ಬಿಜೆಪಿ ಸಂಘಟನೆಗೆ ಪ್ರಯತ್ನ ಮಾಡುತ್ತೇವೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ವಿಚಾರವಾಗಿ ಮಾತನಾಡಿದ ಮಾಜಿ ಸಚಿವರು, ಬಹಳ ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ, ಆ ಬಗ್ಗೆ ನೆಪ ಹೇಳಲ್ಲ. ಸೋಲು ಸ್ವೀಕಾರ ಮಾಡುತ್ತೇವೆ, ನೂತನ ಶಾಸಕರಿಗೆ ಅಭಿನಂದನೆ ಎಂದು ಪರೋಕ್ಷವಾಗಿ ಲಕ್ಷ್ಮಣ್ ಸವದಿಗೆ ಅಭಿನಂದನೆ ಸಲ್ಲಿಸಿದರು. ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರುತ್ತೇವೆ ಎಂದಿದ್ದರು. ಅಭಿವೃದ್ಧಿ ಮಾಡಲಿ ನಾವು ಸಹಕಾರ ಕೊಡುತ್ತೇವೆ ಅಂತಾನೂ ಹೇಳಿದರು.