ಯಾದಗಿರಿ; ಸಾಲ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ಮೋಸ; ದೂರು ದಾಖಲು

ಆತ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸುತ್ತಾನೆ. ಸಾಲ ಕೇಳಲು ಬಂದವರಲ್ಲಿ ಸಾಲ ಕೊಡುವ ಮೊದಲೆ ಬಡ್ಡಿ ಪಡೆಯುತ್ತಾನೆ. ಬಳಿಕ ಸಾಲ ಕೊಡದೆ ಸಿಕ್ಕಾಪಟ್ಟೆ ಸತಾಯಿಸಿ, ಹಾಗೆನಾದ್ರು ಸಾಲಕ್ಕಿಂತ ಮೊದಲೇ ಕೊಟ್ಟ ಬಡ್ಡಿ ಹಣವಾದ್ರು ಕೊಡಿ ಎಂದು ಕೇಳಿದ್ರೆ ಬೆದರಿಕೆ ಹಾಕ್ತಾನಂತೆ. ಇದೀಗ ಈ ರೀತಿ ಸಾಲ ಪಡೆಯಲು ಹಣ ಕೊಟ್ಟು ಮೊಸ ಹೋದವರು ಪೊಲೀಸರ ಮೊರೆ ಹೋಗಿದ್ದಾರೆ.

ಯಾದಗಿರಿ: ಸಾಲ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು, ಹಣ ಕೊಟ್ಟವರಿಗೆ ಬೆದರಿಕೆ ಹಾಕ್ತಾರಂತೆ. ಇದೀಗ ಸಾಲಕ್ಕಾಗಿ ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದು, ಕೊಟ್ಟು ಕೆಟ್ಟ ಹಣವನ್ನ ವಾಪಸ್ ಕೊಡಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ. ಹೌದು ನಗರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಮಕ್ಮಲ ಟೋಪಿ ಹಾಕುವ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಯಾವುದೇ ದಾಖಲಾತಿಗಳು ಇಲ್ಲದೆ ಇದ್ರೂ ಸಹ ಸಾಲ ಕೊಡಿಸುತ್ತೆವೆ ಎಂದು ಹೇಳುತ್ತಾರಂತೆ. ಹೀಗಾಗಿ ಹಣದ ಅವಶ್ಯಕತೆ ಇದ್ದವರು ಈ ಗ್ಯಾಂಗ್​ನ್ನ ಸಂಪರ್ಕ ಮಾಡುತ್ತೆ, ಬಳಿಕ ಇಲ್ಲಿ ಆಗೋದೆ ಬೇರೆ.

ಯಾದಗಿರಿಯ ರಾಜೀವ್ ಗಾಂಧಿ ನಗರದ ನಿವಾಸಿ ಸಂತೋಷ್ ರಾಠೋಡ್​ ಎಂಬುವವನು ಸಾಕಷ್ಟು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದಾನೆಂದು ಆರೋಪಿಸಲಾಗುತ್ತಿದೆ. ಹೌದು ಕಡಿಮೆ ದರದಲ್ಲಿ ಸಾಲ ಕೊಡಿಸುತ್ತಾನೆ ಅಂತ ವಿಷಯ ಕೇಳಿ ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ರಂಗರಾವ್ ಸಾಲ ಕೇಳ ಬಂದಿದ್ರಂತೆ. ನೇರವಾಗಿ ಸಂತೋಷ್ ಮನೆಗೆ ಬಂದು 10 ಲಕ್ಷ ಸಾಲ ಕೇಳಿದ್ದಾರೆ. ಆದ್ರೆ, ಸಾಲ ಕೊಡಿಸುವ ಮೊದಲೇ ಸಂತೋಷ್ ರಂಗರಾವ್ ಬಳಿ ಒಂದು ವರ್ಷದ ಬಡ್ಡಿ ಅಂತ 80 ಸಾವಿರ ಹಾಗೂ ದಾಖಲಾತಿ ಚಾರ್ಜ್ 16 ಸಾವಿರ ಮುಂಗಡವಾಗಿ ಪಡೆದಿದ್ದಾನಂತೆ.