ರೈಲು ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹವನ್ನಿರಿಸಿದ್ದ ಶಾಲೆಯನ್ನು ಕೆಡವಿದ ಆಡಳಿತ ಮಂಡಳಿ

ದೆಹಲಿ: ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಇರಿಸಲು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಿದ್ದ ಸರ್ಕಾರಿ ಶಾಲೆಯನ್ನು ಇಂದು ನೆಲಸಮಗೊಳಿಸಲಾಗಿದೆ. 288 ಜನರ ಸಾವಿಗೆ ಕಾರಣವಾದ ಟ್ರಿಪಲ್ ರೈಲು ಅಪಘಾತದ ನಂತರ ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ ಬಾಲಸೋರ್‌ನ ಸರ್ಕಾರಿ ಬಹನಾಗಾ ಪ್ರೌಢಶಾಲೆಯನ್ನು ಶುಕ್ರವಾರ ಕೆಡವಲಾಗಿದೆ. ದುರಂತ ಸಂಭವಿಸಿದ ನಂತರ ವಿದ್ಯಾರ್ಥಿಗಳಿಗೆ ಆ ಕಟ್ಟಡದಲ್ಲಿರುವ ತಮ್ಮ ತರಗತಿಗಳಿಗೆ ಮರಳಲು ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.

ಹಲವು ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆ ಆವರಣಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದು, ಹಳೆ ಕಟ್ಟಡವನ್ನು ಕೆಡವುವಂತೆ ಶಾಲಾ ಆಡಳಿತ ಸಮಿತಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಕಟ್ಟಡ ಸುರಕ್ಷಿತವಾಗಿಲ್ಲ. ರೈಲು ಅಪಘಾತ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ ಎಂದು ಸಮಿತಿಯು ಹೇಳಿಕೆ ನೀಡಿದೆ.

ಜೂನ್ 2 ರ ರೈಲು ಅಪಘಾತದ ನಂತರ, 65 ವರ್ಷ ಹಳೆಯ ಶಾಲಾ ಕಟ್ಟಡಕ್ಕೆ ಮೃತದೇಹಗಳನ್ನು ತಂದಿಡಲಾಗಿತ್ತು. ಕಿರಿಯ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಎಂದು ಬಹನಾಗಾ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಸ್ವೈನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಅವರ ಭಯವನ್ನು ಹೋಗಲಾಡಿಸಲು ಕೆಲವು ಕಾರ್ಯಗಳನ್ನು ಆಯೋಜಿಸಲು ಚಿಂತಿಸಿದೆ ಎಂದು ಪ್ರಮೀಳಾ ಹೇಳಿದ್ದಾರೆ. ರೈಲು ಅಪಘಾತದ ನಂತರ ಶಾಲೆಯ ಕೆಲವು ಹಿರಿಯ ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.

ಗುರುವಾರ ಶಾಲೆಗೆ ಭೇಟಿ ನೀಡಿದ್ದ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ, ‘ಶಾಲಾ ಆಡಳಿತ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಇತರೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಭೇಟಿ ಮಾಡಿ, ಹಳೆ ಕಟ್ಟಡವನ್ನು ಕೆಡವಿ ಮಕ್ಕಳಿಗೆ ನವೀಕರಿಸಲು ಮುಂದಾಗಿದ್ದಾರೆ. ಮಕ್ಕಳು ತರಗತಿಗೆ ಬರಲು ಭಯ ವ್ಯಕ್ತಪಡಿಸಿದ ನಂತರ ಇದನ್ನು ಕೆಡವಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಜೂನ್ 2 ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದರು ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅಪಘಾತದಿಂದಾಗಿ ಜನನಿಬಿಡ ಮಾರ್ಗದಲ್ಲಿ ಸರಕು ಮತ್ತು ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಅಪಘಾತದ 51 ಗಂಟೆಗಳ ನಂತರ ಭಾನುವಾರ ತಡರಾತ್ರಿ ರೈಲು ಸಂಚಾರ ಪುನರಾರಂಭವಾಯಿತು.