ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು; ಸ್ವಪಕ್ಷೀಯರ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಸಿಟಿ ರವಿ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ  ಹೀನಾಯ ಸೋಲಿಗೆ ಕಾರಣವೇನು ಎಂಬ ಕುರಿತು ಪಕ್ಷದ ನಾಯಕರು ಪರಾಮರ್ಶೆ ಸಭೆ ನಡೆಸಿದ್ದಾರೆ. ಕೆಲವೊಬ್ಬ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನೂ ಮಾಡಿಕೊಂಡಿದ್ದಾರೆ. ಇವೆಲ್ಲದರ ಮಧ್ಯೆ, ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ವಪಕ್ಷೀಯರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿ ರಾಜಕಾರಣದಿಂದಲೇ ಬಿಜೆಪಿ ಸೋತಿದೆ ಎಂದು ಹೇಳಿದ್ದಾರೆ.

ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದಿದ್ದರೆ ಇವತ್ತು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸ್ವ ಪಕ್ಷದ ನಾಯಕರ ವಿರುದ್ಧವೇ ಸಿಟಿ‌ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಲಿನ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿ ಪ್ರಸ್ತಾಪಿಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ಸ್ವಪಕ್ಷೀಯರ ಮೇಲೆ ವಾಗ್ದಾಳಿ ನಡೆಸಿದ್ದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಬಿಜೆಪಿ ಸೇರಿದ್ದೆ. ಆದರೆ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತಾಯಿತು. ಮಾಜಿ ಸಚಿವ ಡಾ ಕೆ ಸುಧಾಕರ್ ಅವರ ಕಾರಣದಿಂದಲೇ ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ನಾಗರಾಜ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

‘ಪಠ್ಯದಿಂದ ಹೊರಹಾಕಬಹುದು, ಹೃದಯದಿಂದಲ್ಲ’

ಕಾಂಗ್ರೆಸ್ ಸರ್ಕಾರ ಪಠ್ಯ ಪುಸ್ತಕ ಮರು ಪರಿಷ್ಕರಣೆ ಮಾಡುವ ಬಗ್ಗೆ ಮತ್ತು ಆರ್​​ಎಸ್​ಎಸ್ ಸಂಸ್ಥಾಪಕ ಹೆಡಗೇವಾರ್​ ಅವರ ಕುರಿತ ಮಾಹಿತಿ ಕೈಬಿಡುವ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು, ಆದರೆ ಆರ್​​ಎಸ್​​​ಎಸ್ ನಾಯಕರದ್ದು ಬೇಡವೇ ಎಂದು ಪ್ರಶ್ನಿಸಿದ್ದಾರೆ.

ಇವರ ನೆರವು ಇಲ್ಲದೆ ಸಂಘದ ಶಾಖೆಯ ಮೂಲಕವೇ ವಿಚಾರ ಬೆಳೆಯಲಿದೆ. ಪಠ್ಯದಿಂದ ಹೊರಹಾಕಬಹುದಷ್ಟೇ ವಿನಃ ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ನೆಹರು, ಇಂದಿರಾ ಈ ಬಗ್ಗೆ ಪ್ರಯತ್ನ ಮಾಡಿ ‌ಸೋತಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್​​ನವರನ್ನು ಯಾಕೆ‌ ಅಂಡಮಾನ್ ಜೈಲಿಗೆ ಹಾಕಲಿಲ್ಲ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆಗೆ ಬೆಂಗಲಿಗರು ತುಂಬಾ ಜನರು ಇದ್ದಾರೆ. ದೇಶಭಕ್ತಿಯ ಕಾರಣಕ್ಕೆ ಸೂಲಿಬೆಲೆ ಪ್ರಖ್ಯಾತರಾಗಿದ್ದಾರೆ. ಅವರ ಪ್ರಖ್ಯಾತಿ ಕುಗ್ಗಿಸೋಕೆ ಆಗಲ್ಲ. ಕಾಂಗ್ರೆಸ್​​ನವರು ಮತ್ಸರ, ದ್ವೇಷ ಹೊರಹಾಕುತ್ತಿದ್ದಾರೆ. ಅಧಿಕಾರದ ಮದವನ್ನು ಜನರು ಇಳಿಸುತ್ತಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಸದ್ದಿದ್ದಲದೆ ವಿದ್ಯುತ್ ಬಿಲ್ ಏರಿಸುತ್ತಿದ್ದಾರೆ. ಹಾಲಿನ ದರ ಏರಿಸುತ್ತಿದ್ದಾರೆ. ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ ಆಗಿದೆ ಎಂದು ರವಿ ವ್ಯಂಗ್ಯವಾಡಿದ್ದಾರೆ.

ಕೆಕೆಆರ್​ಡಿಬಿ ಅಕ್ರಮ ಆಗಿದ್ರೆ ಕ್ರಮ ತೆಗೆದುಕೊಳ್ಳಿ. ಟೇಬಲ್ ಮಾಡಿ ಕ್ರಮ ತೆಗೆದುಕೊಳ್ಳಿ. ಅರ್ಕಾವತಿ ಹಗರಣವನ್ನು ತನಿಖೆ ಮಾಡಿ. 8000 ಕೋಟಿ ರೂ. ನಷ್ಟದ ಬಗ್ಗೆಯೂ ತನಿಖೆ ಮಾಡಲಿ. ತೆರಿಗೆ ಕಟ್ಟುವವರ ಮೇಲೆ ಯಾಕೆ ಬರೆಹಾಕ್ತೀರಿ? ಸೋಲಾರ್ ಪವರ್ ಪ್ಲಾಂಟ್​ನ ನಡೆದಿರುವ ಅಕ್ರಮದ ಬಗ್ಗೆಯೂ ತನಿಖೆ ನಡೆಯಲಿ, ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿಲ್ವಾ? ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಭಯವೇ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.