ರಾಜು ಕಾಗೆ ಮನೆ ಬಳಿ ಆತ್ಮಹತ್ಯೆಗೆ ನಿರ್ಧರಿಸಿದ್ದ ಗ್ರಾ.ಪಂ. ಸದಸ್ಯ ವಶಕ್ಕೆ;

ವಿರುದ್ಧದ ಕಿರುಕುಳ ಆರೋಪದ ಬಗ್ಗೆ ಶಾಸಕ ಹೇಳಿದ್ಧೇನು?

ಬೆಳಗಾವಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಅವರು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಮನೆ ಬಳಿ ಆತ್ಮಹತ್ಯೆಗೆ ನಿರ್ಧರಿಸಿದ್ದ ಗ್ರಾ.ಪಂ. ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ್ದ ಶಿರಗುಪ್ಪಿ ಗ್ರಾ.ಪಂ ಸದಸ್ಯ ರಾಮನಗೌಡ ಪಾಟೀಲ್​ನನ್ನು ಶಿರಗುಪ್ಪಿ ನಿವಾಸಕ್ಕೆ ಆಗಮಿಸಿದ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಶಿರಗುಪ್ಪಿ ಗ್ರಾ.ಪಂ. ಕಚೇರಿಯಲ್ಲಿ ಕುಳಿತು ಶಾಸಕರಿಗೆ ಕರೆ ಮಾಡಿ ಆತ್ಮಹತ್ಯೆ‌ ಮಾಡಿಕೊಳ್ತೀನಿ. ಹೆಂಡತಿ, ಮಕ್ಕಳ ಸಮೇತ ಬಂದು ನಿಮ್ಮ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರಾಮನಗೌಡ ಪಾಟೀಲ್ ಬೆದರಿಕೆ ಹಾಕಿದ್ದರು. ಅಲ್ಲದೆ ಶಿರಗುಪ್ಪಿ ಗ್ರಾಮದಲ್ಲಿ ಇಡೀ ಊರಿಗೆ ಮೈಕ್ ಸಿಸ್ಟಮ್ ಅಳವಡಿಸಿ ಊರಿನ ಜನರಿಗೆ ಅರ್ಥವಾಗುವ ರೀತಿ ಶಾಸಕರಿಗೆ ಫೋನ್ ಮಾಡಿ ಮಾತನಾಡಿದ್ದರು. ನಿನ್ನೆ ತಡರಾತ್ರಿ ರಾಮನಗೌಡ ಪಾಟೀಲ್ ಮೈಕ್‌ನಲ್ಲಿ ಅನೌನ್ಸ್ ಹಿನ್ನೆಲೆ ಅಥಣಿ ಪೊಲೀಸರು ರಾಮನಗೌಡ ಪಾಟೀಲ್ ವಶಕ್ಕೆ ಪಡೆದಿದ್ದಾರೆ.

ಆರೋಪದ ಬಗ್ಗೆ ಶಾಸಕ ರಾಜು ಕಾಗೆ ಹೇಳಿದ್ದೇನು?
ರಾಮನಗೌಡ ಪಾಟೀಲ್ ನನ್ನ ಮೇಲೆ ಮಾಡಿದ ಆರೋಪ ಸುಳ್ಳು ಎಂದು ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ್‌ಖುರ್ದ್​​ ಗ್ರಾಮದ ನಿವಾಸದಲ್ಲಿ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ. ರಾಮನಗೌಡ ಪಾಟೀಲ್ ಆರೋಪಕ್ಕೂ ನನಗೂ ಸಂಬಂಧವಿಲ್ಲ. ರಾಮನಗೌಡ ಪಾಟೀಲ್ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ಇದ್ದರೆ ಆತ ಕೋರ್ಟ್‌ಗೆ ಹೋಗಲಿ. ಯಾಕೆ ನನ್ನ ತೇಜೋವಧೆ‌ ಮಾಡ್ತಿದ್ದಾರೋ ಗೊತ್ತಿಲ್ಲ. ರಾಮನಗೌಡ ಪಾಟೀಲ್ ವಿರುದ್ಧ ಮಾನನಷ್ಟ ಕೇಸ್​ ದಾಖಲಿಸ್ತೇನೆ. ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ್ರೆ ಹೇಗೆ ಸಹಿಸಲಿ? ರಾಷ್ಟ್ರಪತಿ, ಪ್ರಧಾನಿ, ಸಿಎಂ ಕಿರುಕುಳ ಕೊಡ್ತಿದ್ದಾರೆ ಅಂದ್ರೆ ಸರಿ ಆಗುತ್ತಾ? ಮನೆ ಕಟ್ಟಲು ಆತನೇ ನನ್ನ ಬಳಿ 3 ಲಕ್ಷ ರೂ. ಪಡೆದುಕೊಂಡಿದ್ದಾನೆ. ಹಣ ವಾಪಸ್ ಕೇಳಿದರೆ ಸುಳ್ಳು ಆರೋಪ ಮಾಡ್ತಿದ್ದಾನೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ. ತನ್ನ ಗಂಡನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಣ್ಣೀರು ಹಾಕಿದ ಪತ್ನಿ ಸುನಿತಾ ಪಾಟೀಲ್.
ಮಾಧ್ಯಮಗಳ ಎದುರು ಶಿರಗುಪ್ಪಿ ಗ್ರಾ.ಪಂ.ಸದಸ್ಯ ರಾಮನಗೌಡ ಪತ್ನಿ ಸುನಿತಾ ಪಾಟೀಲ್ ಕಣ್ಣೀರು ಹಾಕಿದರು. ನನ್ನ ಪತಿಗೆ ರಾಜು ಕಾಗೆಯವರು ಕಿರುಕುಳ ನೀಡುತ್ತಿದ್ದಾರೆ. ನಾನೂ ಸಹ ರಾಜು ಕಾಗೆಯವರನ್ನು ಕೇಳಿದೆ. ಏನಾಗಿದೆ ಅಂತ ಹೇಳಿ ಅಂದ್ರೆ ರಾಜು ಕಾಗೆ ಏನೂ ಹೇಳಲಿಲ್ಲ. ಕಳೆದ 20 ವರ್ಷಗಳಿಂದ ನನ್ನ ಪತಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜು ಕಾಗೆಯವರು ಇಂತಹ ಅನ್ಯಾಯ ಮಾಡಬಾರದಿತ್ತು. ಅಧಿಕಾರ ಇದ್ದಾಗ ಒಂದು ರೀತಿ ಅಧಿಕಾರ ಇಲ್ಲದಿದ್ದಾಗ ಈ ರೀತಿ ಮಾಡಬಾರದಿತ್ತು. ನಾವೀಗ ವಿಷದ ಬಾಟಲಿ ಇಟ್ಟುಕೊಂಡು ಕುಳಿತಿದ್ದೇವೆ. ನನ್ನ ಮಂಗಳಸೂತ್ರ ಮಾರಿ ಅವರ ಎಲೆಕ್ಷನ್ ನಾವು ಮಾಡಿದ್ದೇವೆ. ನಾವು ಬಿಜೆಪಿಯಲ್ಲಿದ್ದೆವು, ನಾವು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ನಮ್ಮ ಅವರ ಮಧ್ಯೆ 3 ಲಕ್ಷದ ವ್ಯವಹಾರ ಆಗಿತ್ತು. ಎಲೆಕ್ಷನ್ ಸೋತ ಬಳಿಕ ನಮ್ಮ ಹಣ ನೀನು ನನಗೆ ತಂದುಕೊಡು ಎಂದು ರಾಜು ಕಾಗೆ ಧಮ್ಕಿ ಹಾಕೋಕೆ ಶುರು ಮಾಡಿದ್ದರು. ಶ್ರೀಮಂತ ಪಾಟೀಲ್ ಅವರ ಜೊತೆಗೆ ಇರುವ ಫೋಟೋ ನೋಡಿದ ಬಳಿಕ ರಾಜು ಕಾಗೆ ಹೀಗೆ ಮಾಡೋಕೆ ಶುರು ಮಾಡಿದ್ರು ಎಂದು ಸುನಿತಾ ಪ್ರತಿಕ್ರಿಯಿಸಿದ್ದಾರೆ.

ಶಾಸಕರಿಂದ ನನ್ನ ತಂದೆಗೆ ಕಿರುಕುಳ ಆಗ್ತಿದೆ
ಶಿರಗುಪ್ಪಿಯಲ್ಲಿ ಗ್ರಾ.ಪಂ.ಸದಸ್ಯ ರಾಮನಗೌಡ ಮಗಳು ಶೃತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನನ್ನ ಅಪ್ಪ ಮೊದಲು ಬಿಜೆಪಿಯಲ್ಲಿದ್ದರು. ರಾಜು ಕಾಗೆ ಸಹ ಬಿಜೆಪಿಯಲ್ಲಿದ್ದರು. ರಾಜು ಕಾಗೆ ಕಾಂಗ್ರೆಸ್ ಗೆ ಹೋದಾಗ ನಮ್ಮ ತಂದೆಯವರೂ ಸಹ ಕಾಂಗ್ರೆಸ್ ಪರ ಕೆಲಸ‌ ಮಾಡಿದ್ದರು. ಆಗ ರಾಜು ಕಾಗೆಯವರು ವಿನ್ ಆಗಲಿಲ್ಲ. ನಮ್ಮ ತಂದೆ ಕಾಗವಾಡ ಬ್ಲಾಕ್ ಬಿಜೆಪಿ ಅಧ್ಯಕ್ಷರಾದರು. ನಮ್ಮ ತಂದೆ ಸದ್ಯ ಬಿಜೆಪಿಯಲ್ಲಿದ್ದಾರೆ. ನಮ್ಮ ತಂದೆಯವರನ್ನು ರಾಜು ಕಾಗೆ ಸಾಕಷ್ಟು ಬಾರಿ ಕಾಂಗ್ರೆಸ್ ಗೆ ಕರೆದರು. ಎಲೆಕ್ಷನ್ ಆದ ನಂತರ ಜೆಜೆಎಂ ಕಾಮಗಾರಿ ಜಾರಿಯಲ್ಲಿತ್ತು. ನಮ್ಮ ತಂದೆಯೇ ಅದನ್ನ ಮುಂದೆ ನಿಂತು ಕೆಲಸ ಮಾಡಿಸ್ತಿದ್ದರು. ಶಿರಗುಪ್ಪಿಯಲ್ಲಿ ಜೆಜೆಎಂ ಸಕ್ಸಸ್ ಆಗಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಇದೇ ಕಾರಣ ನಮ್ಮ ತಂದೆ ರಾಮನಗೌಡ ಅಂತಾನೂ ಮಾಧ್ಯಮಗಳು ವರದಿ ಮಾಡಿವೆ. ಅದನ್ನ ನೋಡಿ ಆ ಕಾಮಗಾರಿಯನ್ನೆ ರಾಜು ಕಾಗೆ ಸ್ಥಗಿತ ಮಾಡಿದ್ದಾರೆ. ಅದಾದ ಬಳಿಕ ನಮ್ಮ ಎಂಎಸ್​ಐಎಲ್ ಇದೆ. ಅದನ್ನೂ ಸಹ ಮೇಲಿನ ಅಧಿಕಾರಿಗಳಿಗೆ ಕರೆ ಮಾಡಿ ಎಂಎಸ್​ಐಎಲ್ ಮಾಡಿ ಇಲ್ಲ ಟ್ರಾನ್ಸಫರ್ ಮಾಡಿ ಎಂದು ಒತ್ತಡ ಹಾಕ್ತಿದ್ದಾರೆ. ನಮ್ಮ ತಂದೆ ಕರೆ ಮಾಡಿ ಮಾತನಾಡಿದರೆ ರಾಜು ಧಮ್ಕಿ ಹಾಕುತ್ತಿದ್ದಾರೆ. ರಾಜು ಕಾಗೆ ನಮ್ಮ ಕುಟುಂಬಕ್ಕೆ ಧಮ್ಕಿ ಹಾಕುತ್ತಿದ್ದಾರೆ ಎಂದು ರಾಮನಗೌಡ ಮಗಳು ಶೃತಿ ಆರೋಪಿಸಿದ್ದಾರೆ.