ಆಕೆ ನನ್ನನ್ನು ನಿರ್ಲಕ್ಷಿಸುತ್ತಿದ್ದಳು; ಸಿಟ್ಟಿನಿಂದ ಕೊಂದೆ, ಇದಕ್ಕೆ ವಿಷಾದಿಸುತ್ತಿಲ್ಲ: ದೆಹಲಿ ಹತ್ಯೆ ಪ್ರಕರಣದ ಆರೋಪಿ

ದೆಹಲಿ: ಭಾನುವಾರ ದೆಹಲಿಯ (Delhi Murder Case) ರಸ್ತೆಯೊಂದರಲ್ಲಿ ಬಾಲಕಿಯೊಬ್ಬಳನ್ನು ಹತ್ಯೆಗೈದ ಪ್ರಕರಣದಲ್ಲಿ ಬಂಧಿತನಾದ 20 ವರ್ಷದ ಯುವಕ ಸಾಹಿಲ್ (Sahil), ಸಿಟ್ಟಿನ ಭರದಲ್ಲಿ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅದೇ ವೇಳೆ ಕೃತ್ಯವೆಸಗಿರುವ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾನೆ. ಜನರು ನೋಡುತ್ತಿದ್ದಂತೆಯೇ ರಸ್ತೆಯಲ್ಲಿ 16 ವರ್ಷದ ಬಾಲಕಿಗೆ 22 ಬಾರಿ ಇರಿದು,ಕಾಲಿನಿಂದ ತುಳಿದು, ಕಲ್ಲು ಎತ್ತಿ ಹಾಕಿ ಅತಿ ಕ್ರೂರವಾಗಿ ಕೊಲೆ ಮಾಡಿದ್ದ ಸಾಹಿಲ್. ಎಸಿ ರಿಪೇರಿ ಮಾಡುವ ಸಾಹಿಲ್‌ನನ್ನು ನಿನ್ನೆ (ಸೋಮವಾರ) ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ (Bulandshahr) ಬಂಧಿಸಲಾಗಿತ್ತು. ಆತನನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ರಾತ್ರಿ ವಿಚಾರಣೆಯ ವೇಳೆ ತನಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ತನ್ನೊಂದಿಗೆ ಬ್ರೇಕ್ ಅಪ್ ಮಾಡಲು ಬಯಸಿದ್ದಳು. ಆಕೆ ಮತ್ತೆ ಮಾಜಿ ಗೆಳೆಯನೊಂದಿಗೆ ಸಂಪರ್ಕ ಹೊಂದಿದ್ದಳು ಸಾಹಿಲ್ ಹೇಳಿದ್ದಾನೆ. ಆಕೆಯ ಮಾಜಿ ಗೆಳೆಯ ಗೂಂಡಾ, ನಾನು ಆತನಿಗೆ ಭಯಪಡುತ್ತಿದ್ದೆ. ನಾವಿಬ್ಬರೂ ಮೂರು ವರ್ಷದಿಂದ ಪ್ರೀತಿಸುತ್ತಿದ್ದೆವು. ಆದರೆ ಇತ್ತೀಚೆಗೆ ಅವಳು ಸಂಬಂಧವನ್ನು ಕೊನೆಗೊಳಿಸಿದ್ದಳು. ಕೆಲವು ಸಮಯದಿಂದ ಆಕೆ ನನ್ನನ್ನು ನಿರ್ಲಕ್ಷಿಸುತ್ತಿದ್ದಳು. ಇದರಿಂದ ನಾನು ಕೋಪಗೊಂಡಿದ್ದೆ ಎಂದು ಆತ ಹೇಳಿದ್ದಾನೆ. ಬಾಲಕಿಯ ಮೇಲೆ ಹಲ್ಲೆ ನಡೆಸಿದಾಗ ಆತ ಕುಡಿದಿದ್ದ ಎನ್ನಲಾಗಿದೆ.
ಭಾನುವಾರ ಸಂಜೆ ಸಂತ್ರಸ್ತೆ ಸ್ನೇಹಿತೆಯ ಮಗನ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಸಾಹಿಲ್ ಅವಳನ್ನು ಗೋಡೆಗೆ ಒತ್ತಿ ಹಲವಾರು ಬಾರಿ ಚಾಕುನಿಂದ ಇರಿದಿದ್ದ. ಇರಿತಕ್ಕೊಳಗಾಗಿ ಆಕೆ ಕುಸಿದು ಬಿದ್ದಾಗ ಕಾಲಿನಿಂದ ತುಳಿದ. ಅಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿ ನಾಲ್ಕೈದು ಬಾರಿ ಆಕೆಯ ಮೇಲೆ ಹಾಕಿದ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಜನರು ಮೂಕಪ್ರೇಕ್ಷಕರಾಗಿ ನಿಂತಿದ್ದರು.

ಯಾರೋ ಪೊಲೀಸರಿಗೆ ಕರೆ ಮಾಡುವ ಮೊದಲು ಹುಡುಗಿಯ ದೇಹವು ಸುಮಾರು 25 ನಿಮಿಷಗಳ ಕಾಲ ಬೀದಿಯಲ್ಲಿ ಬಿದ್ದಿತ್ತು. ಆಕೆಯ ದೇಹದಲ್ಲಿ 34 ಗಾಯಗಳಿದ್ದು, ತಲೆಬುರುಡೆ ಛಿದ್ರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಹಿಲ್ ಚಾಕು ಮತ್ತು ತನ್ನ ಫೋನ್ ಎಸೆದು ಬುಲಂದ್‌ಶಹರ್‌ಗೆ ಬಸ್ಸಿನಲ್ಲಿ ಹೋಗಿದ್ದ. ಅಲ್ಲಿ ಅವನು ತನ್ನ ಚಿಕ್ಕಮ್ಮನ ಮನೆಯಲ್ಲಿ ಅಡಗಿಕೊಂಡಿದ್ದ. ತನ್ನಿಂದದೂರ ಹೋಗದೇ ಇದ್ದರೆ ಪೊಲೀಸರಿಗೆ ಹೋಗುವುದಾಗಿ ಹುಡುಗಿ ಬೆದರಿಕೆ ಹಾಕಿದ್ದಳು. ಅವನನ್ನು ಹೆದರಿಸಲು ಆಟಿಕೆ ಪಿಸ್ತೂಲ್ ಅನ್ನು ಸಹ ಬಳಸಿದ್ದಳು. ಹತ್ಯೆಯ ಹಿಂದಿನ ದಿನ ಇಬ್ಬರೂ ಜಗಳವಾಡಿದ್ದರು. ಸಾಹಿಲ್ ತನ್ನ ಹೆಸರನ್ನು ಹುಡುಗಿಯ ಸ್ನೇಹಕ್ಕಾಗಿ ಬದಲಾಯಿಸಿದ್ದನೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.