5 ಗ್ಯಾರಂಟಿಗಳ ಜಾರಿಗೆ ಮೊದಲ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್


ಬೆಳಗಾವಿ: 5 ಗ್ಯಾರಂಟಿಗಳ ಜಾರಿಗೆ ಮೊದಲ ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು ಐದು ಗ್ಯಾರಂಟಿಗಳನ್ನು ನಾವು ಜಾರಿಗೆ ತಂದೇ ತರುತ್ತೇವೆ. ನಾವಂತೂ ಗ್ಯಾರಂಟಿ ಭರವಸೆ ಈಡೇರಿಸಲು ಸಿದ್ಧರಿದ್ದೇವೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇವೆ. ಗ್ಯಾರಂಟಿ ಜಾರಿ ಮಾಡಲು ಐದಾರು ತಿಂಗಳು ಸಮಯ ಕೇಳುತ್ತಿಲ್ಲ. 15-20 ದಿನಗಳ ಕಾಲಾವಕಾಶ ಕೇಳ್ತಿದ್ದೇವೆ ಎಂದು ಹೇಳಿದರು.

ಯಾವ ಖಾತೆ ಕೊಡುತ್ತಾರೆ ಎಂಬುದು ನಾಳೆ ಗೊತ್ತಾಗುತ್ತೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್
ಗ್ಯಾರಂಟಿ ಜಾರಿ ಮಾಡದಿದ್ರೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನೆ ಮಾಡಲಿ ಅವರು ಎಂದಿದ್ದಾರೆ. ಕರೆಂಟ್ ಬಿಲ್ ಕಟ್ಟಬೇಡಿ ಎಂದು H.D.ಕುಮಾರಸ್ವಾಮಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಹೆಚ್ಡಿ ಕುಮಾರಸ್ವಾಮಿ ಈ ರೀತಿ ಹೇಳೋದು ತಪ್ಪು, ಅವರಿಗೂ ಗೊತ್ತಿದೆ. ನಿಯಮಾನುಸಾರವಾಗಿ ಯೋಜನೆ ಅನುಷ್ಠಾನಗೊಳಿಸಬೇಕಾಗುತ್ತೆ. ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಖಂಡಿತವಾಗಿಯೂ ಜನರಿಗೆ ನೀಡಿದ ಭರವಸೆ ಈಡೇರಿಸುತ್ತೇವೆ. ನನಗೆ ಯಾವ ಖಾತೆ ಕೊಡುತ್ತಾರೆ ಎಂಬುದು ನಾಳೆ ಗೊತ್ತಾಗುತ್ತೆ ಎಂದರು.

ಅಭಿವೃದ್ಧಿಯ ಎರಡನೇ ಭಾಗ ನೋಡುತ್ತೀರಾ
ಬೆಳಗಾವಿ ತಾಲೂಕಿಗೆ ಪ್ರಥಮ ಬಾರಿ ಸಚಿವ ಸ್ಥಾ‌ನ ಸಿಕ್ಕ ವಿಚಾರವಾಗಿ ಅವರು ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರ ಪ್ರಭುಗಳಿಗೆ ಪಾದಗಳಿಗೆ ನಮಸ್ಕಾರ ಮಾಡುತ್ತೇನೆ. ಗ್ರಾಮೀಣ ಕ್ಷೇತ್ರದ ಮಗಳು ಅಂತಿದ್ದೆ, ಮಗಳನ್ನು ನಿಜವಾಗಿ ಸ್ವೀಕಾರ ಮಾಡಿದ್ದಾರೆ. ಇದು ತಾಲೂಕಿಗೆ ಸಂದ ಗೌರವ, ಗ್ರಾಮೀಣ ಕ್ಷೇತ್ರಕ್ಜೆ ಹೆಮ್ಮೆಯ ವಿಚಾರ. ಬಹಳ ಸಂತೋಷ ಅಭಿಮಾನ ಅನಿಸುತ್ತೆ.
ನನಗೆ ಯಾವ ಇಲಾಖೆ ವಹಿಸುತ್ತಾರೆ ನಾಳೆ ಗೊತ್ತಾಗುತ್ತದೆ. ಜಿಲ್ಲೆಗೆ ಶಾಶ್ವತ ಯೋಜನೆ, ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇನೆ. ಸರ್ಕಾರ ನಮ್ಮದಿದೆ, ಅಭಿವೃದ್ಧಿಯ ಎರಡನೇ ಭಾಗ ಐದು ವರ್ಷದಲ್ಲಿರುತ್ತೆ ಎಂದು ಹೇಳಿದರು.