ಸಿಮೆಂಟ್ ಕಂಪನಿ ವಿರುದ್ಧ ನಿರಂತರವಾಗಿ 172 ದಿನಗಳಿಂದ ಧರಣಿ ನಡೆಸುತ್ತಿದ್ದ ರೈತ ಸಾವು

ಕಲಬುರಗಿ: ದೇಶದ ಬೆನ್ನೆಲುವು ರೈತನ ಕಷ್ಟಗಳು ಒಂದಾ ಎರಡಾ. ಸಾಲಸೂಲ ಮಾಡಿ ಲಕ್ಷ ಲಕ್ಷ ಹಣ ಬಂಡವಾಳ ಹಾಕಿ, ಬೀಜಗಳನ್ನು ಭೂಮಿ ತಾಯಿಗೆ ಅರ್ಪಿಸಿ ಮಗುವಂತೆ ಬೆಳೆದು ಬೆಳೆ ತೆಗೆದು ಮಾರಾಟಕ್ಕೆ ಇಳಿದಾಗ ಉತ್ತಮ ಬೆಲೆ ಸಿಗದೆ ಕಂಗಾಲಾಗಿ ನೊಂದರೂ ಜನರ ಹಸಿವನ್ನು ನೀಗಿಸುತ್ತಾನೆ ಅನ್ನದಾತ. ಬೆಳೆ ಕೈಕೊಟ್ಟ ಕಂಗಾಲಾದರೂ ಕುಗ್ಗದೆ ಮುನ್ನುಗ್ಗುತ್ತಾನೆ. ಆದ್ರೆ ರಾಜ್ಯದಲ್ಲಿ ರೈತರಿಗೆ ಉತ್ತಮ ಯೋಜನೆಗಳಿಲ್ಲ. ಇದ್ದರೂ ಅವು ಪ್ರಯೋಜನವಿಲ್ಲ. ಸಿಮೆಂಟ್ ಕಂಪನಿ ವಿರುದ್ಧ ನಿರಂತರವಾಗಿ ಧರಣಿ ನಡೆಸುತ್ತಿದ್ದ ರೈತ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ-ಬೆನಕಹಳ್ಳಿ ಗ್ರಾಮದಲ್ಲಿ ನಡೆದಿದೆ. ದೇವಿಂದ್ರಪ್ಪ ಮೃತ ರೈತ.

ಕೊಡ್ಲಾ-ಬೆನಕಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಸಿಮೆಂಟ್ ಕಂಪನಿಗೆ ಜಮೀನು ಮಾರಾಟ ಮಾಡಿದ್ದ ದೇವಿಂದ್ರಪ್ಪ ಹಾಗೂ ನೂರಾರು ರೈತರು ಕಳೆದ 172 ದಿನಗಳಿಂದ ಸಿಮೆಂಟ್ ಫ್ಯಾಕ್ಟರಿ ಮುಂದೆ ನಿರಂತರ ಧರಣಿ ನಡೆಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ರೈತ ದೇವಿಂದ್ರಪ್ಪ (50) ಧರಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶ್ರೀ ಸಿಮೆಂಟ್ ಫ್ಯಾಕ್ಟರಿಗೆ ಮೃತ ದೇವಿಂದ್ರಪ್ಪ 2.20 ಎಕರೆ ಜಮೀನನ್ನ ನೀಡಿದ್ದರು. ಫ್ಯಾಕ್ಟರಿಗೆ ಭೂಮಿ ನೀಡಿರೋ ರೈತರಿಗೆ ಉದ್ಯೋಗ ಮತ್ತು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಅಪಘಡವೊಂದು ಸಂಭವಿಸಿದೆ.


ಸಾಲಭಾದೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆ
ಹುಣಸೂರು ತಾಲ್ಲೂಕು ಶ್ಯಾನಭೋಗನಹಳ್ಳಿಯ ಸುರೇಶ್(58) ಎಂಬಾತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ಎಕರೆ ಜಮೀನು ಹೊಂದಿದ್ದ ರೈತ ಸುರೇಶ್, ಬ್ಯಾಂಕ್ ಸೊಸೈಟಿ ಸೇರಿ 7 ಲಕ್ಷ ಸಾಲ ರೂಪಾಯಿ ಸಾಲ ಮಾಡಿದ್ದ. ಇನ್ನೇನು ಬೆಳೆ ಬಂದ ಕೂಡಲೇ ಎಲ್ಲವನ್ನ ಹಿಂದಿರುಗಿಸುವ ಉತ್ಸಾಹದಲ್ಲಿದ್ದ ರೈತನಿಗೆ ಬೆಳೆ ಕೈ ಕೊಟ್ಟ ಹಿನ್ನೆಲೆ‌ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮತ್ತೊಂದೆಡೆ ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (78) ಎಂಬಾತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 5 ಎಕರೆ ಜಮೀನು ಹೊಂದಿದ್ದ ರಾಜಶೆಟ್ಟಿ, ತಂಬಾಕು ರಾಗಿ ಬೆಳೆ ಬೆಳೆದಿದ್ದರು. ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿ ಸುಮಾರು 8 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗಿತ್ತು. ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.