ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

ರಾಯ್ಪುರ: 18 ವರ್ಷದ ಮಗನನ್ನು ಕೊಂದು ಆತನ ಶವವನ್ನು ರಸ್ತೆ ಪಕ್ಕದಲ್ಲಿ ಎಸೆದು ಅಪಘಾತವಾಗಿ (Accident) ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ ಘಟನೆ ಛತ್ತಿಸ್‌ಗಢದ (Chattisgarh) ರಾಯ್‌ಗಢ (Raigarh) ಜಿಲ್ಲೆಯಲ್ಲಿ ನಡೆದಿದೆ.

ಲೈಲುಂಗಾ (Lailunga) ಪೊಲೀಸ್ ಠಾಣಾ ವ್ಯಾಪ್ತಿಯ ಲೋಹದಪಾನಿ ಗ್ರಾಮದ ನಿವಾಸಿ ಕುಹ್ರು ಸಿಂಗರ್ ಅವರ ಪುತ್ರ ಟೆಕ್ಮಣಿ ಪೈಕಾರ ಅವರ ಮೃತದೇಹ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಪತ್ತೆಯಾಗಿದೆ ಎಂದು ಲೈಲುಂಗಾ ಉಪವಿಭಾಗಾಧಿಕಾರಿ ದೀಪಕ್ ಮಿಶ್ರಾ ತಿಳಿಸಿದ್ದಾರೆ.

ಬೈಕ್ ಅಪಘಾತವಾಗಿ ಟೆಕ್ಮಾಣಿ ಸಾವನ್ನಪ್ಪಿದ್ದಾರೆ ಎಂದು ಮೃತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದರು. ಪ್ರಥಮ ಪಿಯುಸಿ ಓದುತ್ತಿದ್ದ ಟೆಕ್ಮಾಣಿ ಹಾಸ್ಟೆಲ್‌ನಿಂದ ಮನೆಗೆ ಬಂದಿದ್ದು, ಮತ್ತೆ ಬೈಕಿನಲ್ಲಿ ಹಿಂದಿರುಗಿದ್ದಾನೆ. ಬಳಿಕ ತಮ್ಮ ಮನೆಯ ಸಮೀಪವಿರುವ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮೃತನ ತಾಯಿ ಕರಮವತಿ ಪೈಕಾರ (40) ಹೇಳಿಕೆ ನೀಡಿದ್ದಾರೆ.

ಮೃತನ ಮರಣೋತ್ತರ ಪರೀಕ್ಷೆಯು ಆತನ ದೇಹದಲ್ಲಿ ಗಂಭೀರವಾದ ಗಾಯಗಳನ್ನು ಬಹಿರಂಗಪಡಿಸಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೃತನ ಮನೆಯಲ್ಲಿ ತನಿಖೆ ನಡೆಸಿದಾಗ ಮನೆಯ ಅಲ್ಲಲ್ಲಿ ಹೊಸದಾಗಿ ಪೈಂಟ್‌ಗಳನ್ನು ಮಾಡಿಸಲಾಗಿತ್ತು. ಅಲ್ಲದೇ ಮನೆಯ ಅಂಗಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇದು ಮನುಷ್ಯನ ರಕ್ತ ಎಂದು ದೃಢಪಟ್ಟಿದೆ. 

ಈ ಕುರಿತು ಪೋಷಕರನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತನ್ನ ಮಗನಿಗೆ ಕಲಿಕೆಯಲ್ಲಿ ಆಸಕ್ತಿ ಇಲ್ಲದೇ ಇದ್ದುದ್ದರಿಂದ ಹಾಸ್ಟೆಲ್‌ನಿಂದ ಮನೆಗೆ ಬಂದ ತಕ್ಷಣ ಆತನಿಗೆ ಹೊಡೆದಿದ್ದೇನೆ. ಇದರಿಂದ ಆತ ಮೃತಪಟ್ಟಿದ್ದು ಆತನ ಮೃತದೇಹ ಹಾಗೂ ಬೈಕನ್ನು ರಸ್ತೆ ಪಕ್ಕ ಇರಿಸಿ ಕೊಲೆಯನ್ನು ಮರೆಮಾಚುವ ಪ್ರಯತ್ನ ಮಾಡಿದ್ದೇವೆ ಎಂದು ಮೃತನ ತಂದೆ ಒಪ್ಪಿಕೊಂಡಿದ್ದಾರೆ.

ಮಗನನ್ನು ಹತ್ಯೆಗೈದ ಪೋಷಕರನ್ನು ಬಂಧಿಸಿ ಕೊಲೆ, ಸಾಕ್ಷ್ಯ ನಾಶಪಡಿಸುವಿಕೆ ಮತ್ತು ಇತರ ಅಪರಾಧಗಳ ಆರೋಪವನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ದೀಪಕ್ ಮಿಶ್ರಾ ತಿಳಿಸಿದ್ದಾರೆ.