ಚುನಾವಣಾ ಮುಗಿಯುತ್ತಿದ್ದಂತೆ ಫೀಲ್ಡ್​​ಗೆ ಇಳಿದ ಹಳೆಯ ಕಳ್ಳರು, ಚೆಕ್ ಪೋಸ್ಟ್ ತೆಗದಿದ್ದೇ ಫ್ರೀ ಫಾರ್​ ಆಲ್​ ಅಂತಾ… ಕಳ್ಳರಿಗೆ ಬಂತು ಸುಗ್ಗಿಕಾಲ!

ರಾತ್ರಿಯಾದ್ರೆ ಸಾಕು ಅಲ್ಲಿ‌ ವಾಹನ ಕಳ್ಳರ ಹಾವಳಿ,‌ ಒಂದಿಲ್ಲ ಒಂದು ಕಡೆ ವಾಹನ ಕಳ್ಳತನವಾಗಿ ಕೇಸ್ ದಾಖಲಾಗ್ತಿತ್ತು. ‌ಆದರೆ ಅಸಂಬ್ಲಿ ಚುನಾವಣೆ ನಿಮಿತ್ತ ಚೆಕ್ ಪೋಸ್ಟ್ ಹಾಕಿದ್ದ‌ ಕಾರಣ ಕಳ್ಳರು ಬಾಲ‌ಬಿಚ್ಚಿರಲಿಲ್ಲ. ಈಗ ಚೆಕ್ ಪೋಸ್ಟ್ ತೆರವಾದ ನಂತರ ಮತ್ತೆ ಕಳ್ಳರ‌ ಓಡಾಟ ಹೆಚ್ಚಾಗಿದ್ದು ಜನ ಭೀತಿಗೊಳಗಾಗಿದ್ದಾರೆಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಬಾರ್ಡರ್ ಬಳಿ ಹಾಕಲಾಗಿದ್ದ ಚುನಾವಣಾ ಚೆಕ್ ಪೋಸ್ಟ್ ತೆರವು ಮಾಡಲಾಗಿದೆ. ಆದರೆ ಇದ್ರಿಂದಾಗಿ ಚಂದಾಪುರ, ಬೊಮ್ಮಸಂದ್ರ ಜನ ಬಹಳ ಭೀತಿಗೀಡಾಗಿದ್ದಾರೆ. ಏನಪ್ಪಾ‌ ಅಂದ್ರೆ ರಾತ್ರಿ ಆದರೆ ಸಾಕು ಓಣಿಗಳಲ್ಲಿ ಓಡಾಡಿ ಬೆಲೆ ಬಾಳುವ ವಾಹನಗಳನ್ನು ಕದ್ದು ಓಡುವ ಕಳ್ಳರ ಹಾವಳಿ ಕೆಲ ದಿನಗಳಿಂದ ನಿಂತಿತ್ತು. ತಮಿಳುನಾಡು ರಾಜ್ಯದಿಂದ ಬಾರ್ಡರ್ ದಾಟಿ ಬರುತ್ತಿದ್ದ ಕಳ್ಳರ ಗ್ಯಾಂಗ್ ಚುನಾವಣಾ ಚೆಕಪೋಸ್ಟ್​​ ಇದ್ದ ಕಾರಣ ಭಯ ಪಟ್ಟಿತ್ತು.

ಚುನಾವಣಾ ನೀತಿ ಸಂಹಿತೆ ವಾಪಸ್​ ತಗೊಳ್ಳುವುದಕ್ಕೇ ಕಾಯ್ತಿದ್ದರಾ ಖದೀಮರು!
ಇದರಿಂದಾಗಿ ವಾರದಲ್ಲೇ ನಾಲ್ಕೈದು ವಾಹನಗಳ ಕಳುವು ಪ್ರಕರಣ ದಾಖಲಾಗೋದು ತಪ್ಪಿತ್ತು. ಇದಕ್ಕೆ ಪ್ರಮುಖ ಕಾರಣ ಅತ್ತಿಬೆಲೆ ಬಾರ್ಡರ್ ಬಳಿ ಹಾಕಲಾಗಿದ್ದ ಚುನಾವಣಾ ಚೆಕ್ ಪೋಸ್ಟ್. ಹೀಗಾಗಿ ಈ ಕಳೆದ ಎರಡು ವಾರದಲ್ಲಿ ಐದು ವರ್ಷದಲ್ಲೇ ಅತಿ ಕಡಿಮೆ ಸಂಖ್ಯೆಯಲ್ಲಿ ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಅಂತ ಪೊಲೀಸ್ ಮೂಲಗಳು ತಿಳಿಸಿವೆ. ಈಗ ಚುನಾವಣೆ ಮುಗಿದ ಕಾರಣ ಚೆಕ್ ಪೋಸ್ಟ್ ಬಳಿಯ ಪೊಲೀಸ್ ಸಿಬ್ಬಂದಿಯನ್ನು ವಾಪಾಸ್ ಕರೆಸಿಕೊಂಡಿದ್ದು, ಈಗ ಮತ್ತೆ ಕಳ್ಳತನ ಹೆಚ್ಚಾಗುವ ಭೀತಿ ಆನೇಕಲ್ ಜನರಿಗೆ ಹೆಚ್ಚಾಗಿದೆ.! ಚುನಾವಣಾ ನೀತಿ ಸಂಹಿತೆ ವಾಪಸ್​ ತಗೊಳ್ಳುವುದಕ್ಕೇ ಕಾಯ್ತಿದ್ದರಾ ಖದೀಮರು ಅನ್ನಿಸುತ್ತಿದೆ!ಬೆಂಗಳೂರು ಚೆನೈ ಹೈವೇ ಅತ್ತಿಬೆಲೆ ಬಾರ್ಡರ್ ನಿಂದ ಕಳ್ಳರು ಬಹಳಷ್ಟು ಬಾರಿ ವಾಹನ ಕದ್ದು ಓಡಿರುವ ಪ್ರಕರಣಗಳು ಆನೇಕಲ್ ತಾಲೂಕಿನ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಚಂದಾಪುರ, ಹಳೇ ಚಂದಾಪುರ, ಬೊಮ್ಮಸಂದ್ರ ಭಾಗದಲ್ಲಿ ಅತಿ ಹೆಚ್ಚು ಕಳ್ಳತನ ಮಾಡುತ್ತಿದ್ದ ಕಳ್ಳರು ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳನ್ನು ಲಾಕ್ ಮುರಿದು ಬಾರ್ಡರ್ ದಾಟಿಸಿ ಕದ್ದೊಯ್ದ ಅನೇಕ ಪ್ರಸಂಗಗಳು ಸಿಸಿಟಿವಿಯಲ್ಲಿಯೂ ಸೆರೆಯಾಗಿವೆ. ಸದ್ಯ ಕಳೆದ ಎರಡು ವಾರಗಳಿಂದ ಇದ್ದ ಚುನಾವಣಾ ನೀತಿ ಸಂಹಿತೆ ಪರಿಣಾಮ ‌ಬಾರ್ಡರ್ ಬಳಿ ಪ್ರತಿಯೊಂದು ವಾಹನ‌ ಚೆಕ್ ಆಗ್ತಾ ಇತ್ತು. ಚೆಕಿಂಗ್ ಗೆ ಹೆದರಿದ್ದ ಕಳ್ಳರು ತಮ್ಮ ಕೈ ಚಳಕ ತೋರಿಸೋದನ್ನು ಬಿಟ್ಟಿದ್ದರು.‌ ಈಗ ಚೆಕ್ ಪೋಸ್ಟ್ ತೆರವು ಆದ ಪರಿಣಾಮ‌ ಮತ್ತೆ ತಮ್ಮ ಹಳೆಯ ಚಾಳಿ ಮುಂದುವರಿಸಲು ಮುಂದಾಗಿದ್ದಾರೆ.

ಇದು ಅಂತಾರಾಜ್ಯ ಗಡಿ ಆಗಿರುವುದರಿಂದ ಕೊನೆಯ ಪಕ್ಷ ಒಬ್ಬ ಪೊಲೀಸ್ ಸಿಬ್ಬಂದಿಯನ್ನಾದ್ರೂ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ಹಾಕಿದ್ರೆ… ಆಗುವ ಬಹುತೇಕ ಕಳ್ಳತನಕ್ಕೆ ಬ್ರೇಕ್ ಹಾಕಬಹದು ಅನ್ನೋದು ಸ್ಥಳೀಯರ ಮನವಿ. ಇವರ ಮನವಿಗೆ ಓಗೊಟ್ಟು ಪೊಲೀಸ್ ಅಧಿಕಾರಿಗಳು ತಪಾಸಣೆ ಸಿಬ್ಬಂದಿಯನ್ನು ಹಾಕಿ ಕಳ್ಳತನಕ್ಕೆ ಬ್ರೇಕ್ ಹಾಕುತ್ತಾರಾ ಕಾದು ನೋಡಬೇಕು…