ಕೋಕ್ತಿ ಕ್ರಾಸ್ ನಲ್ಲಿ ಪಾದಾಚಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್: ಪಾದಾಚಾರಿ ಸ್ಥಳದಲ್ಲೇ ಸಾವು

ಭಟ್ಕಳ: ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಎಸ್.ಆರ್.ಎಸ್ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಾವಿನಕಟ್ಟಾ ಕೋಕ್ತಿ ಕ್ರಾಸ್ ನಲ್ಲಿ ನಡೆದಿದೆ. ಹೊನ್ನಪ್ಪ ತಿಮ್ಮಯ್ಯ ನಾಯ್ಕ (66) ಮೃತ ಪಾದಾಚಾರಿ.

ಈತ ಕೋಕ್ತಿ ಕ್ರಾಸ್ ನಿಂದ ಮಾವಿನಕಟ್ಟಾ ಮೀನು ಮಾರುಕಟ್ಟೆ ಕಡೆ ಹೋಗಲು ನಡೆದುಕೊಂಡು ರಸ್ತೆ ದಾಟುತ್ತಿದ್ದ. ಈ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬಸ್ ಚಾಲಕ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಹೆದ್ದಾರಿ ದಾಟುತ್ತಿದ್ದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.