ರಾಜ್ಯ ಬಿಜೆಪಿ ಸರ್ಕಾರ ಕೈಯಲ್ಲಿ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ ಹಣ ಬಾಚುತ್ತಿದೆ – ಕುಮಾರಸ್ವಾಮಿ ಕಿಡಿ

ಬೆಂಗಳೂರು: ರಾಜ್ಯ ಬಿಜೆಪಿಯ ಭ್ರಷ್ಟಾಚಾರ ಮಿತಿ ಮೀರಿದ್ದು, ಸರ್ಕಾರ ಕೈಯಲ್ಲಿ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ ಹಣ ಬಾಚುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇನ್ ಸ್ಪೆಕ್ಟರ್ ನಂದೀಶ್ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಗೆ ಕುಮಾರಸ್ವಾಮಿ ಪದ್ಮನಾಭನಗರದಲ್ಲಿ ಪ್ರತಿಕ್ರಿಯೆ ನೀಡಿದರು.

ಎಂಟಿಬಿ ನಾಗರಾಜ್ ವಿಡಿಯೋ ಜಗಜ್ಜಾಹೀರಾಗಿದೆ. ಸರ್ಕಾರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಬಿಟ್ಟರೆ ಮತ್ಯಾರು ಸರಿಯಿಲ್ಲ, ಎಲ್ಲರೂ ದುಡ್ಡಿನ ದಂಧೆ ಮಾಡಲು ಬಾಗಿಲು ತೆಗೆದುಕೊಂಡು ಕೂತಿದ್ದಾರೆ ಎಂದರು. ಪೊಲೀಸ್ ಇಲಾಖೆಯಲ್ಲಿ ಭಾರೀ ದೊಡ್ಡ ದಂಧೆ ನಡೆಯುತ್ತಿದೆ. ನನಗೆ ಎಲ್ಲವೂ ಗೊತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಕೈಯಲ್ಲಿ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ ಹಣ ಬಾಚುತ್ತಿದೆ, ಎಲ್ಲಾ ಹಗರಣಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.