ಪಾರದರ್ಶಕತೆಗೆ ಕೇಂದ್ರದ ಕ್ರಾಂತಿಕಾರಿ ಕ್ರಮ: ಪಡಿತರ ವ್ಯವಸ್ಥೆಯಲ್ಲಿ ಡಿಜಿಟಲ್ ಕರೆನ್ಸಿ ಬಳಕೆ

ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ CBDC ಆಧಾರಿತ ‘ಡಿಜಿಟಲ್ ಆಹಾರ ಕೂಪನ್’ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಈ ಹೊಸ ವ್ಯವಸ್ಥೆಗೆ ಗುಜರಾತ್‌ನಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ.

ಈ ಯೋಜನೆಯ ಮೂಲಕ ಡಿಜಿಟಲ್ ಕರೆನ್ಸಿಯನ್ನು ಬಳಸಿಕೊಂಡು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಸುಗಮಗೊಳಿಸಲಾಗುತ್ತದೆ. ನೈಜ ಸಮಯದ ಮೇಲ್ವಿಚಾರಣೆ ಮತ್ತು ವಹಿವಾಟುಗಳ ದಾಖಲಾತಿಯಿಂದ ಭ್ರಷ್ಟಾಚಾರ ತಡೆಗಟ್ಟುವ ಗುರಿ ಹೊಂದಲಾಗಿದೆ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಇದು ಮಹತ್ವದ ಹೊಸ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.

ನವದೆಹಲಿ

ದೇಶದ ಪಡಿತರ (Ration)ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಟಲೀಕರಣಕ್ಕೆ ಒತ್ತು ನೀಡಿರುವ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ದೂರದೃಷ್ಠಿಯಂತೆ ಈಗಾಗಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್, ಅನುಷ್ಠಾನಕ್ಕಿಳಿದಿರುವ ಕೇಂದ್ರ ಸರ್ಕಾರ, ಇದೀಗ ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆ ರೂಪದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಸಾಮಾಜಿಕ-ಸಾರ್ವತ್ರಿಕ ವಲಯದ ಯೋಜನೆಯಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಕರೆನ್ಸಿ ಬಳಸುವ ಮತ್ತೊಂದು ಹೊಸ ಪರಿವರ್ತನಾ ಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆ ಜಾರಿಗೊಳಿಸಿದೆ.

ಇದರಿಂದ ನ್ಯಾಯ ಬೆಲೆ ಅಂಗಡಿಯವರಿಗೆ ತತ್ ಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆ, ಹೀಗೆ ಪಡಿತರದ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಕರೆನ್ಸಿಗೆ ರೂಪಾಂತರವಾಗಿ ಪಾರದರ್ಶಕತೆಯತ್ತ ಇಟ್ಟ ದಿಟ್ಟ ಹೆಜ್ಜೆಯಾಗಿ ಗುರುತಿಸಿಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾತ್ರವೂ ಇದರಲ್ಲಿ ಅಡಕವಾಗಿದೆ ಎಂಬುದು ಮತ್ತೊಂದು ವಿಶೇಷ.

ಗುಜರಾತ್ ನಲ್ಲಿ ಶುರು:

ಕೇಂದ್ರ ಸರ್ಕಾರ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆಯನ್ನು ಪ್ರಥಮವಾಗಿ ಗುಜರಾತ್ ಅಲ್ಲಿ ಆರಂಭಿಸಿದೆ. ಅಹಮದಾಬಾದ್ ಅಲ್ಲಿ ಭಾನುವಾರ ಗೋಲ್ CBDC-ಆಧಾರಿತ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿ ಚಾಲನೆ ನೀಡಿದೆ.

ಸದ್ಯಕ್ಕೆ ಎಲ್ಲೆಲ್ಲಿ ಯೋಜನೆ?:

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಗುಜರಾತ್ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸದ್ಯಕ್ಕೆ ಮೊದಲನೇ ಹಂತದಲ್ಲಿ ಅಹಮದಾಬಾದ್, ಆನಂದ್, ದಾಹೋದ್ ಮತ್ತು ಸಬರಮತಿ ಜಿಲ್ಲೆಗಳಲ್ಲಿ ಈ ‘ಡಿಜಿಟಲ್ ಆಹಾರ ಕರೆನ್ಸಿ’ ಪ್ರಾರಂಭವಾಗಿದೆ. ಮುಂದಿನ ಹಂತದಲ್ಲಿ ಪುದುಚೇರಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಲ್ಹಾದ್ ಜೋಶಿ ಇದೆ ವೇಳೆ ಘೋಷಿಸಿದರು.

ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ಇದೇ ಮೊದಲು:

ಸಿಬಿಡಿಸಿ ಆಧಾರಿತ ವ್ಯವಸ್ಥೆಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ದೇಶದ ಇತಿಹಾಸದಲ್ಲಿ ಇದೇ ಮೊದಲು. ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳಿಗೆ ಪ್ರೋಗ್ರಾಮೆಬಲ್ ಡಿಜಿಟಲ್ ಕರೆನ್ಸಿಯಾಗಿ ನೇರವಾಗಿ ಜಮಾ ಮಾಡಲಾಗುತ್ತದೆ. ಇದನ್ನು ಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯ ಖರೀದಿಸಲು ಸಹ ಬಳಸಬಹುದು. ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ, ಯಾವುದೇ ಅವ್ಯವಹಾರಕ್ಕೂ ಅಸ್ಪದವಾಗುವುದಿಲ್ಲ ಎಂದು ಜೋಶಿ ವಿವರಿಸಿದರು.

QR-ಕೂಪನ್ ಕೋಡ್:

ಪಡಿತರ ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳು ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ ಹೊಂದಿರುತ್ತವೆ. ಫಲಾನುಭವಿಗಳ ಅನುಕೂಲಕ್ಕಾಗಿ ಪಿಡಿಎಸ್ ಅಡಿ ಆಹಾರ ಧಾನ್ಯ ಖರೀದಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ತಡೆರಹಿತ QR ಕೋಡ್, ಕೂಪನ್ ಕೋಡ್ ಆಧಾರಿತ ವಹಿವಾಟನ್ನು ಸಕ್ರಿಯಗೊಳಿಸುತ್ತದೆ ಎಂದರು.

ಡಿಜಿಟಲ್ ಆಹಾರ ಕರೆನ್ಸಿ ಪ್ರಯೋಜನ:

ಇದು ವಲಸೆ ಬಂದ ಜನರಿಗೆ ಅನುವು ಮಾಡಿಕೊಡುತ್ತದೆ. ಸ್ಮಾರ್ಟ್ ಫೋನ್ ಮೂಲಕ QR CODE ಬಳಸಿ ಹಾಗೂ ನಾರ್ಮಲ್ ಫೋನ್ ಗಳಲ್ಲಿ 10 digit code ಬಳಸಿ ಸಹ ಪಡಿತರ ವಿತರಣೆ ಸಾಧ್ಯವಾಗುತ್ತದೆ.

ಪ್ರಲ್ಹಾದ ಜೋಶಿ ಕಾರ್ಯಕ್ಕೆ ಅಮಿತ್ ಶಾ ಶ್ಲಾಘನೆ: ಈ ನೂತನ CBDC ಆಧಾರಿತ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಗೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ದೇಶದ ಕೋಟ್ಯಂತರ ಕಡುಬಡವರಿಗೆ ತ್ವರಿತವಾಗಿ ಪಡಿತರ ತಲುಪಿಸುವ ಜತೆಗೆ ದೇಶಾದ್ಯಂತ ಪಡಿತರ ವ್ಯವಸ್ಥೆಯನ್ನು ಅತ್ಯಂತ ಪರಾದರ್ಶಕೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ, ಗುಜರಾತ್‌ ಡಿಸಿಎಂ ಹರ್ಷ ಸಂಘವಿ; ಗುಜರಾತ್‌ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಮಣಭಾಯಿ ಭಿಕಾಬಾಯಿ ಸೋಲಂಕಿ, ರಾಜ್ಯ ಸಚಿವ ಪೂನಮಚಂದ್ ಛಾನಾಭಾಯಿ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೋನಾ ಖಂಡರ್; ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಾಸುದೇವನ್, ಗಾಂಧಿನಗರದ ಮೇಯರ್ ಮೀರಬೆನ್ ಪಟೇಲ್ ಇತರ ಗಣ್ಯರಿದ್ದರು.