ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಫೈರಿಂಗ್ ಪ್ರಕರಣದ ಬೆನ್ನಲ್ಲೇ ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ಗಳು ನಾಪತ್ತೆಯಾಗಿದ್ದಾರೆ. ಗಲಾಟೆ ವೇಳೆ ಸತೀಶ್ ರೆಡ್ಡಿ ಗನ್ಮ್ಯಾನ್ಗಳು ಗುಂಡು ಹಾರಿಸಿದ್ದರು. ಈಗಾಗಲೇ ಜನಾರ್ದನ ರೆಡ್ಡಿ ಹಾಗೂ ಸತೀಶ್ ರೆಡ್ಡಿಗೆ ಸಂಬಂಧಿಸಿದ ಗನ್ಮ್ಯಾನ್ಗಳಿಂದ ಪೊಲೀಸರು 5 ಗನ್ಗಳನ್ನು ವಶಕ್ಕೆ ಪಡೆದಿದ್ದಾರೆ.

ಗನ್ಗಳನ್ನ ವಶಕ್ಕೆ ಪಡೆದ ಬೆನ್ನಲ್ಲೇ ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ಗಳು ನಾಪತ್ತೆಯಾಗಿದ್ದಾರೆ. ಒಟ್ಟು ನಾಲ್ವರು ಗನ್ಮ್ಯಾನ್ಗಳು ಎಲ್ಲಿಗೆ ನಾಪತ್ತೆಯಾಗಿದ್ದಾರೆಂಬ ಸುಳಿವು ಪತ್ತೆಯಾಗಿಲ್ಲ.

ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ಗಲಾಟೆ ವೇಳೆ ನಡೆದ ಫೈರಿಂಗ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜಟಾಪಟಿಗೆ ಕಾರಣವಾಗಿದೆ. ಮೃತ ವ್ಯಕ್ತಿಗೆ ತಗುಲಿರುವ ಗುಂಡು ಪೊಲೀಸರದ್ದಲ್ಲ, ಖಾಸಗಿ ವ್ಯಕ್ತಿಗಳದ್ದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋಗಳು ರಿಲೀಸ್ ಆಗಿದ್ದು, ಗಲಾಟೆ ವೇಳೆ ಸತೀಶ್ ರೆಡ್ಡಿ ಗನ್ಮ್ಯಾನ್ಗಳು ಫೈರಿಂಗ್ ಮಾಡಿರುವುದು ಕಂಡುಬಂದಿದೆ. ಯಾರ ಗುಂಡು ಮೃತನಿಗೆ ತಗುಲಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



