ಬಸ್‌ಗೆ ನುಗ್ಗಿದ ಕಳ್ಳರು, ಕ್ಷಣಾರ್ಧದಲ್ಲಿ ಅರ್ಧಕೋಟಿ ರೂ. ಎಗರಿಸಿದ್ರು…!

ಚಿಕ್ಕಬಳ್ಳಾಪುರ, 19: ಬೆಂಗಳೂರಲ್ಲಿ ಎಟಿಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಹಾಡಹಗಲೇ ತಡೆದು ಕೋಟ್ಯಾಂತರ ರೂಪಾಯಿ ದರೋಡೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ಆತಂತ ಸೃಷ್ಟಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ನಗದನ್ನು ಕ್ಷಣಾರ್ಧದಲ್ಲಿ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ..

ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಟಿದ್ದ ಕೆಎಸ್​​ಆರ್​ಟಿಸಿ ಬಸ್ ಅನ್ನು ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ಕೆಎ 57 ಎಫ್​-3911 ಸಂಖ್ಯೆಯ ಬಸ್​​ ನಿಲ್ಲಿಸಲಾಗಿತ್ತು. ಊಟಕ್ಕೆಂದು ಕೆಳಗೆ ಇಳಿದು ಬರೋವಷ್ಟರಲ್ಲಿ ಸೀಟ್​​ನಲ್ಲಿ ಇಟ್ಟಿದ್ದ ಹಣದ ಬ್ಯಾಗ್​​ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್​ಗೆ ಸೇರಿದ್ದು, ಬೆಂಗಳೂರಿನಲ್ಲಿದ್ದ ಮನೆ ಮಾರಾಟದಿಂದ ಬಂದಿದ್ದ ನಗದನ್ನು ಅವರು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.

ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್​ನಲ್ಲಿದ್ದ ಇತರ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್​ನೊಳಗೆ ನುಗ್ಗಿದ್ದ ವ್ಯಕ್ತಿ ಸೀಟ್ ನಂ.4ರಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಪೆರೇಸಂದ್ರ ಠಾಣೆಗೆ ಉದ್ಯಮಿ ಕೆ.ವೆಂಕಟೇಶ್ವರ ರಾವ್ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.