India vs South Africa 2025:
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಗಳು ಇದೀಗ ಸಂಪನ್ನವಾಗಿದೆ. ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದಿಂದ ಸೋಲಿನಾಸ್ವಾದಿಸಿದರೂ, ಏಕದಿನ ಸರಣಿಯಲ್ಲಿ 2-1 ಅಂತರದ ಜಯ ದಾಖಲಿಸಿ ಮರಳಿ ಬಂದಿದೆ. ಈಗ, ಉಭಯ ತಂಡಗಳು ಟಿ20 ಸರಣಿಗೆ ಸಜ್ಜಾಗುತ್ತಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 17 ರನ್ಗಳ ಜಯ ಸಾಧಿಸಿದರೆ, ರಾಯ್ಪುರದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ 4 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇನ್ನು ವಿಶಾಖಪಟ್ಟಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಸರಣಿಯನ್ನು ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕಾಗಾರರಿಗೆ ತಿರುಗೇಟು ನೀಡಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಗೌತಮ್ ಗಂಭೀರ್, ಕೋಚಿಂಗ್ ಕೆಲಸದ ಬಗ್ಗೆ ಬಂದ ಟೀಕೆಗಳಿಂದ ಆಘಾತಕ್ಕೊಳಗಾಗಿದ್ದೇನೆ. ಟೆಸ್ಟ್ ಕ್ರಿಕೆಟ್ನಲ್ಲಿ ನಾವು ಬಯಸಿದ್ದಂತೆ ಫಲಿತಾಂಶಗಳು ಮೂಡಿಬಂದಿಲ್ಲ ನಿಜ. ಇದಕ್ಕೆ ಹಲವು ಕಾರಣಗಳಿವೆ. ಇದಾಗ್ಯೂ ಯಾರೂ ಕೂಡ ನಾವು ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ನಾಯಕನಿಲ್ಲದೇ (ಶುಭ್ಮನ್ ಗಿಲ್ ಗಾಯಗೊಂಡಿದ್ದರು) ಆಡಿದ್ದೇವೆ ಎಂಬುದನ್ನು ಉಲ್ಲೇಖಿಸಿಲ್ಲ.
ಶುಭ್ಮನ್ ಗಿಲ್ ಕಳೆದ ಆರೇಳು ಟೆಸ್ಟ್ ಪಂದ್ಯಗಳಿಂದ ಸಾವಿರಕ್ಕೂ ಅಧಿಕ ರನ್ ಗಳಿಸಿದ್ದರು. ಅವರ ಅಲಭ್ಯತೆಯು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಇವೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಚ್ಚರಿ ಎಂದರೆ ಕ್ರಿಕೆಟ್ಗೆ ಯಾವುದೇ ಸಂಬಂಧವಿಲ್ಲದ ಕೆಲವರು ಈ ವಿಷಯಗಳ ಬಗ್ಗೆ ಪ್ರಶ್ನೆಗಳೆತ್ತಿದ್ದರು.
ಅದರಲ್ಲೂ ಐಪಿಎಲ್ ಮಾಲೀಕರೊಬ್ಬರು ಪ್ರತ್ಯೇಕ ಕೋಚಿಂಗ್ ಬಗ್ಗೆಯೂ ಬರೆದಿದ್ದಾರೆ. ಇದು ನಿಜಕ್ಕೂ ತುಂಬಾ ಆಶ್ಚರ್ಯ. ಅವರು ತಮ್ಮ ಕ್ಷೇತ್ರದ ಕೆಲಸಗಳನ್ನು ನೋಡಿಕೊಂಡು ಇರುವುದು ಉತ್ತಮ. ನಾವು ಅವರ ಕ್ಷೇತ್ರಕ್ಕೆ ಹೋಗುವುದಿಲ್ಲ. ಆದ್ದರಿಂದ, ನಾವು ಮಾಡುವ ಕೆಲಸದಲ್ಲಿ ಅವರಿಗೆ ಹಸ್ತಕ್ಷೇಪ ಮಾಡಲು ಯಾವುದೇ ಹಕ್ಕಿಲ್ಲ. ಹೀಗಾಗಿ ಅವರವರ ಕೆಲಸ ನೋಡ್ಕೊಂದು ಸುಮ್ಮನಿರುವುದು ಉತ್ತಮ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.

ಇಲ್ಲಿ ಗೌತಮ್ ಗಂಭೀರ್ ಐಪಿಎಲ್ ಮಾಲೀಕರು ಎಂದು ಉಲ್ಲೇಖಿಸಿರುವುದು ಡೆಲ್ಲಿ ಕ್ಯಾಪಿಟಲ್ಸ್ ಓನರ್ ಪಾರ್ಥ್ ಜಿಂದಾಲ್ ಅವರನ್ನು ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಏಕೆಂದರೆ ಟೀಮ್ ಇಂಡಿಯಾ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಪಾರ್ಥ್ ಜಿಂದಾಲ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಭಾರತ ತಂಡವು ಗೆಲುವಿನ ಹತ್ತಿರಕ್ಕೂ ಬರಲಿಲ್ಲ, ತವರಿನಲ್ಲಿ ಎಂತಹ ಹೀನಾಯ ಸೋಲು! ನಮ್ಮ ಟೆಸ್ಟ್ ತಂಡ ತವರಿನಲ್ಲಿ ಇಷ್ಟು ದುರ್ಬಲವಾಗಿರುವುದನ್ನು ನೋಡಿಲ್ಲ!!! ರೆಡ್ ಬಾಲ್ ಸ್ಪೆಷಲಿಸ್ಟ್ಗಳನ್ನು ಆಯ್ಕೆ ಮಾಡದಿದ್ದಾಗ ಹೀಗಾಗುತ್ತದೆ. ಈ ತಂಡವು ರೆಡ್ ಬಾಲ್ ಫಾರ್ಮ್ಯಾಟ್ನಲ್ಲಿ ನಾವು ಹೊಂದಿರುವ ಆಳವಾದ ಶಕ್ತಿಯನ್ನು ಪ್ರತಿಬಿಂಬಿಸುವಷ್ಟು ಹತ್ತಿರವೂ ಇಲ್ಲ. ಟೆಸ್ಟ್ ಕ್ರಿಕೆಟ್ಗಾಗಿ ಸ್ಪೆಷಲಿಸ್ಟ್ ರೆಡ್ ಬಾಲ್ ಕೋಚ್ ಅನ್ನು ಆಯ್ಕೆ ಮಾಡಲು ಇದು ಸಕಾಲ ಎಂದು ಪಾರ್ಥ್ ಜಿಂದಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಇದನ್ನೇ ಪ್ರಸ್ತಾಪಿಸಿ ಇದೀಗ ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ನೀಡಿರುವುದು ಏಕದಿನ ಸರಣಿ ಗೆದ್ದ ಬಳಿಕ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಪಾರ್ಥ್ ಜಿಂದಾಲ್ ಭಾರತ ಟೆಸ್ಟ್ ತಂಡದ ಅಧಃಪತನವನ್ನು ಉಲ್ಲೇಖಿಸಿ ಟೆಸ್ಟ್ಗೆ ಹೊಸ ಕೋಚ್ ಆಯ್ಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರೆ, ಗೌತಮ್ ಗಂಭೀರ್ ಏಕದಿನ ಸರಣಿ ಗೆದ್ದು ಟೆಸ್ಟ್ ಕ್ರಿಕೆಟ್ಗೆ ವೈಫಲ್ಯಕ್ಕೆ ಉತ್ತರ ನೀಡಿರುವುದು ಅಚ್ಚರಿಯೇ ಸರಿ.



