ಟಂಟಂಗೆ ಬಸ್ ಡಿಕ್ಕಿ: ಕಾರ್ಮಿಕ ಮಹಿಳೆ ಸಾವು

ವಾಡಿ: ರಾವೂರ ಹಾಗೂ ಚಿತ್ತಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಂಟಂ ಹಾಗೂ ಸಾರಿಗೆ ಸಂಸ್ಥೆಯ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಓರ್ವ ಕೃಷಿ ಕಾರ್ಮಿಕ ಮಹಿಳೆ ಮೃತಪಟ್ಟು ಮೂವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಚಿತ್ತಾಪುರ ತಾಲೂಕಿನ ಮೊಗಲಾತಾಂಡಾದ ನಿವಾಸಿ ಫುಲ್ಲಿಬಾಯಿ ಲಕ್ಷ್ಮಣ ರಾಠೋಡ (34) ಮೃತ ಮಹಿಳೆಯಾಗಿದ್ದು, ಅದೇ ಗ್ರಾಮದ ಗಂಗಾಬಾಯಿ ಪ್ರಕಾಶ (45), ತಾರಾಬಾಯಿ ವಿಠ್ಠಲ (45), ಜಮಾನಬಾಯಿ (18) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೃಷಿ ಕೂಲಿ ಕೆಲಸಕ್ಕೆಂದು ಮೊಗಲಾ ತಾಂಡಾದಿಂದ ಟಂಟಂ ವಾಹನದಲ್ಲಿ ರಾವೂರ ಗ್ರಾಮಕ್ಕೆ ಬಂದಿದ್ದರು ಎನ್ನಲಾಗಿದ್ದು, ಕೆಲಸ ಮುಗಿಸಿಕೊಂಡು ಸಂಜೆ ವಾಪಸ್ ಮೊಗಲಾ ತಾಂಡಾಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಚಿತ್ತಾಪುರ ಕಡೆಯಿಂದ ವೇಗವಾಗಿ ಬರುತ್ತಿದ್ದ ಸಾರಿಗೆ ಬಸ್ ಹಾಗೂ ರಾವೂರ ದಿಂದ ಚಿತ್ತಾಪುರ ಮಾರ್ಗವಾಗಿ ಹೋಗುತ್ತಿದ್ದ ಟಂಟಂ ಮಧ್ಯೆ ಡಿಕ್ಕಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಟಂಟಂ ವಾಹನ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವಾಡಿ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಶಿವಕಾಂತ ಕಮಲಪೂರಕರ್ ಹಾಗೂ ಸಿಬ್ಬಂದಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.