1,650 ಕೋಟಿ ವೆಚ್ಚದಲ್ಲಿ ನಿರ್ಮಾಣ – 60,000 ಆಸನ ಸಾಮರ್ಥ್ಯದ ಮೆಗಾ ಸ್ಟೇಡಿಯಂ ಬೆಂಗಳೂರು‌ನಲ್ಲಿ

ಬೆಂಗಳೂರು: ಕ್ರಿಕೆಟ್ ಪ್ರೀಯರಿಗೊಂದು ಗುಡ್‌ನ್ಯೂಸ್. ಕ್ರೀಡೆಗೆ ಹೆಚ್ಚಿನ ಒತ್ತು ನೀಡಲು ಉದ್ಯಾನನಗರಿ ಬೆಂಗಳೂರಿನಲ್ಲಿ ಇನ್ನೊಂದು ಬೃಹತ್ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅವಘಡ ಸಂಭವಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಬೊಮ್ಮಸಂದ್ರದ ಸೂರ್ಯಸಿಟಿಯಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 

1,650 ಕೋಟಿ ರೂಪಾಯಿ ವೆಚ್ಚದಲ್ಲಿ 75 ಎಕರೆಯಲ್ಲಿ 60,000 ಆಸನಗಳ ಸಾಮರ್ಥ್ಯವುಳ್ಳ ಬೃಹತ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗಲಿದ್ದು, ಇದು ರಾಜ್ಯದ ಅತಿ ದೊಡ್ಡ ಸ್ಟೇಡಿಯಂ ಅಂತಾ ಕರೆಸಿಕೊಳ್ಳಲಿದೆ. ಈ ಬೃಹತ್ ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ, ಹೊರಾಂಗಣ ಕ್ರೀಡಾಂಗಣಗಳು, ಅತ್ಯಾಧುನಿಕ ಜಿಮ್, ತರಬೇತಿ ಕೌಶಲ್ಯಗಳು, ಒಲಿಂಪಿಕ್ ಗಾತ್ರದ ಈಜು ಕೊಳಗಳು, ಅತಿಥಿ ಗೃಹಗಳು, ಹಾಸ್ಟೆಲ್‌ಗಳು, ಹೋಟೆಲ್‌ಗಳು, ಕನ್ವೆನ್ಷನ್ ಹಾಲ್ ಅನ್ನು ಒಳಂಗೊಂಡಿರುತ್ತದೆ. 

ಇತ್ತೀಚೆಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿತ್ತು. 2025ರ ಐಪಿಎಲ್ ಟೂರ್ನಿ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ಸಂಭ್ರಮಿಸಲು ಸ್ಟೇಡಿಯಂಗೆ ಬರಲು ಸೂಚಿಸಿತ್ತು. ಈ ಸಂಬಂಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ಮಾಡುವಾಗ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ 11 ಜನರು ಜೀವ ಕಳೆದುಕೊಂಡಿದ್ದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಷ್ಟೊಂದು ಸ್ಥಳ ಇಲ್ಲದ ಕಾರಣ ಜನರು ಹೆಚ್ಚು ಸೇರಿದ್ದರಿಂದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ದೊಡ್ಡ ಮೈದಾನ ನಿರ್ಮಾಣಕ್ಕೆ ಕೈ ಹಾಕಿದೆ.