ರಾಜಣ್ಣ ವಜಾಗೆ ಕಾರಣ ನನಗೆ ತಿಳಿದಿಲ್ಲ: ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು .

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ವಿಧಾನಸೌಧದಲ್ಲಿ ನನ್ನ ಜೊತೆಗೆ ಮಾತಾನಾಡಿದ್ದರು. ಅವರಿಗೂ ಕೂಡ ಕಾರಣ ಏನು ಅನ್ನೋದು ಗೊತ್ತಿಲ್ಲ. ನನಗೆ ಹೈಕಮಾಂಡ್ ಜೊತೆಗೆ ಮಾತಾನಾಡಿ, ಕಾರಣ ಕೇಳಿ ಎಂದು ಹೇಳಿದರು. ಅದಕ್ಕೆ ನಾನು ಈಗಾಗಲೇ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ಈಗ ಕೇಳಿ ಪ್ರಯೋಜನ ಇಲ್ಲ ಎಂದು ಸುಮ್ಮನಾದೆ ಎಂದು ತಿಳಿಸಿದರು.

ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಅನ್ನೋದು ಅಷ್ಟು ವಿವರವಾಗಿ ಗೊತ್ತಿಲ್ಲ. ಸಿಎಂ ಮತ್ತು ಅಧ್ಯಕ್ಷರಿಗೆ ಗೊತ್ತಿರಬಹುದು. ನಮ್ಮ ಪಕ್ಷದ ಹೈಕಮಾಂಡ್‌ನಲ್ಲಿ ಕೆಲವು ನಿಯಮಗಳಿವೆ. ಅವರದ್ದೇ ಆದ ನಿಬಂಧನೆಗಳಿವೆ. ರಾಜಣ್ಣ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಅವ್ರಿಗೂ ಕಾರಣ ಗೊತ್ತಿಲ್ಲ. ಅವ್ರು ರಾಜೀನಾಮೆ ಪತ್ರ ಕೊಡೋದಕ್ಕೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಹೈಕಮಾಂಡ್‌ನಿಂದ ತೆಗೆಯಿರಿ ಎಂದು ಪತ್ರ ಬಂದಿದೆ ಎಂದರು.