ಬೆಂಗಳೂರು, ಆಗಸ್ಟ್ 10: ಮತಗಳ್ಳತನ ಆರೋಪ ಮಾಡಿದ ತಮ್ಮದೇ ಪಕ್ಷದ ನಾಯಕರ ವಿರುದ್ಧ ಸಚಿವ ಕೆಎನ್ ರಾಜಣ್ಣ ನೀಡಿರುವ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಅಸ್ತ್ರವಾಗಿಸಿಕೊಂಡಿದ್ದಾರೆ. ”ಕೈ”ಲಾಗದ ರಾಹುಲ್ ಗಾಂಧಿ ಅವರ ಯೋಗ್ಯತೆಗೆ ಕನ್ನಡಿ ಹಿಡಿಯಲು ತಮ್ಮ ಪರಮಾಪ್ತ ಸಚಿವ ಕೆನ್ ರಾಜಣ್ಣ ಅವರ ಕೈಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರಾ ಸಿಎಂ ಸಿದ್ದರಾಮಯ್ಯನವರು? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ, “ವೋಟರ್ ಲಿಸ್ಟ್ನ್ನು ನಮ್ಮದೇ ಸರ್ಕಾರ ಇರುವಾಗ ಮಾಡಿರುವುದು. ಆಗ ಕಣ್ಮುಚ್ಚಿ ಕುಳಿತಿದ್ದು ಈಗ ಹೇಳಿದರೆ ಏನು ಪ್ರಯೋಜನ” ಎಂದು ಸಚಿವ ಕೆ.ಎನ್ ರಾಜಣ್ಣ ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕರು ಮುಜುಗರಕ್ಕೀಡಾಗುವಂತೆ ಮಾಡಿದ್ದರು. ಈ ಹೇಳಿಕೆಯನ್ನಿಟ್ಟುಕೊಂಡು ವಿಪಕ್ಷ ನಾಯಕ ಆರ್ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಕುರಿತು ಸಾಮಾಜಿ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮತದಾರರ ಪಟ್ಟಿ ಸಿದ್ಧವಾಗಿದ್ದು, ಆಗ ಕಣ್ಮುಚ್ಚಿ ಕುಳಿತಿದ್ದು, ಈಗ ಹೇಳಿದರೆ ಏನು ಪ್ರಯೋಜನ ಎಂದು ಸಚಿವ ರಾಜಣ್ಣನವರು ಸತ್ಯವಾದ ಮಾತು ಹೇಳಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ತಮ್ಮ ಈ ಮಾರ್ಮಿಕ ನುಡಿಗಳನ್ನು ಸಚಿವ ರಾಜಣ್ಣನವರು ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಹೇಳಿದ್ದೋ ಅಥವಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹೇಳಿದ್ದೋ, ಸಿಎಂ ಸಿದ್ದರಾಮಯ್ಯನವರೇ ಹೇಳಬೇಕು” ಎಂದು ಪೋಸ್ಟ್ ಹಾಕಿದ್ದಾರೆ.

