ಮತಗಳ್ಳತನ ಆರೋಪ: ಪಕ್ಷದ ಇಮೇಜ್‌ಗೆ ಧಕ್ಕೆ ತಂದ ಸಚಿವ ರಾಜಣ್ಣ – ಬಿಜೇಪಿಯಿಂದ ತೀವ್ರ ಟೀಕೆ

ಬೆಂಗಳೂರು, ಆಗಸ್ಟ್​ 10: ಮತಗಳ್ಳತನ ಆರೋಪ ಮಾಡಿದ ತಮ್ಮದೇ ಪಕ್ಷದ ನಾಯಕರ ವಿರುದ್ಧ ಸಚಿವ ಕೆಎನ್​ ರಾಜಣ್ಣ ನೀಡಿರುವ ಹೇಳಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಅಸ್ತ್ರವಾಗಿಸಿಕೊಂಡಿದ್ದಾರೆ. ”ಕೈ”ಲಾಗದ ರಾಹುಲ್​ ಗಾಂಧಿ ಅವರ ಯೋಗ್ಯತೆಗೆ ಕನ್ನಡಿ ಹಿಡಿಯಲು ತಮ್ಮ ಪರಮಾಪ್ತ ಸಚಿವ ಕೆನ್​ ರಾಜಣ್ಣ ಅವರ ಕೈಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರಾ ಸಿಎಂ ಸಿದ್ದರಾಮಯ್ಯನವರು? ಎಂದು ವಿಪಕ್ಷ ನಾಯಕ ಆರ್​ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. ಆದರೆ, “ವೋಟರ್​ ಲಿಸ್ಟ್​ನ್ನು ನಮ್ಮದೇ ಸರ್ಕಾರ ಇರುವಾಗ ಮಾಡಿರುವುದು. ಆಗ ಕಣ್ಮುಚ್ಚಿ ಕುಳಿತಿದ್ದು ಈಗ ಹೇಳಿದರೆ ಏನು ಪ್ರಯೋಜನ” ಎಂದು ಸಚಿವ ಕೆ.ಎನ್ ರಾಜಣ್ಣ ಹೇಳುವ ಮೂಲಕ ತಮ್ಮದೇ ಪಕ್ಷದ ನಾಯಕರು ಮುಜುಗರಕ್ಕೀಡಾಗುವಂತೆ ಮಾಡಿದ್ದರು. ಈ ಹೇಳಿಕೆಯನ್ನಿಟ್ಟುಕೊಂಡು ವಿಪಕ್ಷ ನಾಯಕ ಆರ್​ ಅಶೋಕ್​ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಈ ಕುರಿತು ಸಾಮಾಜಿ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿದ ವಿರೋಧ ಪಕ್ಷದ ನಾಯಕ ಆರ್​. ಅಶೋಕ್, “2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮತದಾರರ ಪಟ್ಟಿ ಸಿದ್ಧವಾಗಿದ್ದು, ಆಗ ಕಣ್ಮುಚ್ಚಿ ಕುಳಿತಿದ್ದು, ಈಗ ಹೇಳಿದರೆ ಏನು ಪ್ರಯೋಜನ ಎಂದು ಸಚಿವ ರಾಜಣ್ಣನವರು ಸತ್ಯವಾದ ಮಾತು ಹೇಳಿದ್ದಾರೆ” ಎಂದು ಟ್ವೀಟ್​ ಮಾಡಿದ್ದಾರೆ.

“ತಮ್ಮ ಈ ಮಾರ್ಮಿಕ ನುಡಿಗಳನ್ನು ಸಚಿವ ರಾಜಣ್ಣನವರು ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಹೇಳಿದ್ದೋ ಅಥವಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹೇಳಿದ್ದೋ, ಸಿಎಂ ಸಿದ್ದರಾಮಯ್ಯನವರೇ ಹೇಳಬೇಕು” ಎಂದು ಪೋಸ್ಟ್​ ಹಾಕಿದ್ದಾರೆ.