ಆನೇಕಲ್: ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಆರೋಪಿಯು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ನಡೆದಿದೆ.

ಮಂದಿರ ಮಂಡಲ್ (27) ಕೊಲೆಯಾದ ಮಹಿಳೆ ಹಾಗೂ ಸುಮನ್ ಮಂಡಲ್ (28) ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಪತಿಯ ಸ್ನೇಹಿತನೇ ಮಹಿಳೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಕಳೆದ 8 ವರ್ಷದ ಹಿಂದೆ ಬಿಜೋನ್ ಮಂಡಲ್ ಎಂಬಾತನನ್ನು ಮಹಿಳೆ ವಿವಾಹವಾಗಿದ್ದಳು. ದಂಪತಿಗೆ ಆರು ವರ್ಷದ ಗಂಡು ಮಗನಿದ್ದ. ಎರಡು ವರ್ಷಗಳಿಂದ ಪತಿ, ಪತ್ನಿ ಇಬ್ಬರೂ ಬೇರ್ಪಟ್ಟಿದ್ದರು. ಬಳಿಕ ಮಹಿಳೆಯು ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಿದ್ದಳು.
ಆರೋಪಿ ಸುಮನ್ ಮಂಡಲ್ ಕೊಲೆಯಾದ ಮಹಿಳೆ ಪತಿಯ ಸ್ನೇಹಿತನಾಗಿದ್ದ. ಒಂದು ವರ್ಷದ ಹಿಂದೆ ಬಿಜೋನ್ ಮಂಡಲ್, ಸುಮನ್ ಮಂಡಲ್ ಕೆಲಸಕ್ಕಾಗಿ ಅಂಡಮಾನ್ಗೆ ಹೋಗಿದ್ದರು. ಕಳೆದ 15 ದಿನಗಳ ಹಿಂದೆ ಆರೋಪಿಯು ವಾಪಸ್ ಆಗಿದ್ದ. ಮಂಗಳವಾರ ಸಂಜೆ ಮಹಿಳೆಯ ಮನೆಗೆ ಆರೋಪಿ ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು, ಆರೋಪಿ ಸುಮನ್ ಮಂಡಲ್ ಮನೆಯಲ್ಲಿದ್ದ ಚಾಕುವಿನಿಂದ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿದ್ದ.
ಕೊಲೆಯ ಬಳಿಕ ಆತನೂ ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೀಗ ಪೋಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.

