ರಾಹುಲ್ ಗಾಂಧಿಯ ಪ್ರತಿಭಟನಾ ರ‍್ಯಾಲಿ ಮುಂದೂಡಿಕೆ – ಆ.8ರಂದು ನಡೆಯಲಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ನಿಗದಿಯಾಗಿದ್ದ‌ ರಾಹುಲ್‌ ಗಾಂಧಿ ನೇತೃತ್ವದ ಪ್ರತಿಭಟನಾ ರ‍್ಯಾಲಿ ಆಗಸ್ಟ್‌ 8ಕ್ಕೆ ಮುಂದೂಡಿಕೆಯಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತಗಳ್ಳತನ ಆರೋಪ ಮಾಡಿದ್ದರು. ಕೇಂದ್ರದ ಈ ಕ್ರಮ ವಿರೋಧಿಸಿ ಆಗಸ್ಟ್‌ 5ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಿಗದಿಯಾಗಿತ್ತು. ಇದೇ ಸಮಯದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ನಡುವೆ ಪ್ರತಿಭಟನಾ ರ‍್ಯಾಲಿ ಮುಂದೂಡಿರುವುದಾಗಿ ಡಿಸಿಎಂ ತಿಳಿಸಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ರಣದೀಪ್ ಸುರ್ಜೇವಾಲ ಮಾತನಾಡಿದರು, ಶಿಬು ಸೊರೇನ್ ಅವರ ಮರಣದ ಹಿನ್ನೆಲೆಯಲ್ಲಿ ನಾಳೆ ಅಂತ್ಯ ಸಂಸ್ಕಾರ ನಡೆಯಲಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅದರಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ನಾಳೆಯ (ಆ.5) ಪ್ರತಿಭಟನೆ ಮುಂದೂಡಲಾಗಿದೆ. ಅದನ್ನ ಆ.8ಕ್ಕೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ನಾಳೆ ಶಿಬು ಸೊರೇನ್‌ ಅಂತ್ಯಕ್ರಿಯೆಯಲ್ಲಿ ರಾಹುಲ್‌ ಗಾಂಧಿ ಭಾಗಿಯಾಗಲಿದ್ದಾರೆ. ಇಲ್ಲಿಗೆ ಬಂದು ಅಲ್ಲಿಗೆ ಹೋಗೋದು ಅಂತ ಮೊದಲು ಮಾತುಕತೆ ಆಗಿತ್ತು. ಆದ್ರೆ ಇದು ದೊಡ್ಡ ಸಂದೇಶ ಕೊಡುವ ದಿನ, ಆದ್ದರಿಂದ ಗಡಿಬಿಡಿ ತೀರ್ಮಾನ ಬೇಡ ಅಂತ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ. ಕೆಲವರಿಗೆಲ್ಲಾ ವರಮಹಾಲಕ್ಷ್ಮಿ ಹಬ್ಬ ಅಂತ ಇರುತ್ತದೆ. ಪಕ್ಷದ ಕಾರ್ಯಕ್ರಮದಲ್ಲಿ ಅದನ್ನೆಲ್ಲ ಲೆಕ್ಕದಲ್ಲಿ ಇಟ್ಟುಕೊಳ್ಳೋಕೆ ಆಗಲ್ಲ ಎಂದು ತಿಳಿಸಿದರು.