ಭಟ್ಕಳ ಆ.1 : ಹೆಬಳೆ ಪಂಚಾಯತ ವ್ಯಾಪ್ತಿಯ ಹನೀಫಾಬಾದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾರ್ವಜನಿಕರು ರಾಶಿ ರಾಶಿ ಕಸ ಎಸೆದು ಹೋಗುತ್ತಿದ್ದರು ಅಧಿಕಾರಿ ಕಣ್ಮುಚ್ಚಿಕುಳಿತುಕೊಂಡಿರುವುದು ಮಾತ್ರ ಆಶ್ಚರ್ಯ ಉಂಟು ಮಾಡಿದೆ.

ಈ ಮೊದಲು ಹಳ್ಳಿ ರಸ್ತೆ, ಗ್ರಾಮೀಣ ರಸ್ತೆ ಪಕ್ಕದಲ್ಲಿ ಸಾರ್ವಜನಿಕರು ಕಸ ಎಸೆದು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಈಗ ನಗರ ಭಾಗದಲ್ಲಿ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಕೂಡ ಬಿಡುತ್ತಿಲ್ಲ. ಸರಕಾರ ಸ್ವಚ್ಛ ಭಾರತ ಆಂದೋಲನ, ಜಾಗೃತಿ ಕಾರ್ಯಕ್ರಮವನ್ನು ಪುರಸಭೆ, ಗ್ರಾಮ ಪಂಚಾಯತ ಹಾಗೂ ಪಟ್ಟಣ ಪಂಚಾಯತಗಳಲ್ಲಿ ವಿವಿಧ ಕಾರ್ಯಕ್ರಮದ ಮೂಲಕ ಕಳೆದ ಸಾಕಷ್ಟು ವರ್ಷದಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಸಿಕೊಂಡು ಬರುತ್ತಿದೆ. ಆದರೆ ಅವೆಲ್ಲವೂ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಈ ರೀತಿ ರಸ್ತೆ ಬದಿಗಳಲ್ಲಿ ಕಸ ಎಸೆದು ಹೋಗುವ ಸಾರ್ವಜನಿಕರಿಗೆ ಬುದ್ದಿ ಬರುತ್ತಿಲ್ಲ.

ಕಳೆದ ಒಂದು ವರ್ಷದ ಹಿಂದಷ್ಟೇ ನಮ್ಮ ವಾಹಿನಿಯಲ್ಲಿ ಈ ಬಗ್ಗೆ ಸುದ್ದಿ ಬಿತ್ತರಿಸಿದ ಬಳಿಕ ಇಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ನಂತರ ಕಾಲ ಕ್ರಮೇಣ ಕಸ ಎಸೆದು ಹೋಗುವುದು ಕೂಡ ಕಡಿಮೆ ಆಗಿತ್ತು. ಆದರೆ ಮತ್ತೆ ಈಗ ಅದೇ ರಾಗ ಅದೇ ಹಾಡು ಎಂಬಂತೆ ಸಾರ್ವಜನಿಕರು ಹಳೆ ಚಾಳಿ ಮುಂದುವರೆಸಿದ್ದಾರೆ. ಸಿಸಿಟಿವಿ ಇದ್ದರು ಕೂಡ ರಾಜಾರೋಷವಾಗಿ ಕಸ ಎಸೆದು ಹೋಗುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ.
ಸೂಚನಾ ಫಲಕದಲ್ಲಿ ಎಷ್ಟೇ ದಂಡ ದ ಬಗ್ಗೆ ಉಲ್ಲೇಖಿಸಿದ್ದರೂ, ಕಾರ್ಯರೂಪಕ್ಕೆ ಬಾರದೆ ಹೋದರೆ ಅದು ಪ್ರಯೋಜನವಿಲ್ಲ ಎನ್ನುವುದು ಫಲಕದ ಅಡಿ ಭಾಗದಲ್ಲಿರುವ ತ್ಯಾಜ್ಯದ ರಾಶಿಯನ್ನು ನೋಡುವಾಗ ಅರಿವಾಗುತ್ತದೆ. ಸೂಚನಾ ಫಲಕಕ್ಕೆ ಬೆಲೆ ಕೊಡುತ್ತಿದ್ದರೆ ಯಾವ ಗ್ರಾಮದಲ್ಲೂ ಕಸದ ಸಮಸ್ಯೆಯೇ ಇರುತ್ತಿರಲಿಲ್ಲ. ಕಸ ವಿಲೇವಾರಿಗೆ ಸೂಕ್ತವಾಗಿ ಸ್ಪಂದಿಸದೆ ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಎಸೆದು ಸ್ವಚ್ಛತೆಯ ಪರಿಕಲ್ಪನೆಗೆ ಅಸಹಕಾರ ನೀಡುವವರಿಗೆ ಫಲಕದಲ್ಲಿ ಬರೆದಿರುವಂತೆ ದಂಡ ವಿಧಿಸುವುದೇ ಸೂಕ್ತ.

ಸಾರ್ವಜನಿಕರು ಈ ಭಾಗದಲ್ಲಿ ಕಸ ಎಸೆದು ಹೋಗಬಾರದು ಎನ್ನುವ ದ್ರಷ್ಟಿಯಿಂದ ಇಲ್ಲಿ ಸಿಸಿಟಿವಿ ಅಳವಡಿಸಿದರೆ. ಇದಕ್ಕೂ ಬಗ್ಗದ ಸಾರ್ವಜನಿಕರು ಇಲ್ಲಿ ಕಸ ಎಸೆದು ಹೋಗುತ್ತಿರುವುದು ನೋಡಿದರೆ ನಾಮಕಾವಸ್ತೆಗಿದೆ ಸಿಸಿಟಿವಿ ಅಳವಡಿಸಿದಂತಾಗುತ್ತದೆ. ಹೆಬ್ಳೆ ಪಂಚಾಯತ ಅಧಿಕಾರಿಗಳು ಕಚೇರಿ ಬಿಟ್ಟು ನಗರವನ್ನು ಸುತ್ತಾಡಿದರೆ ಏನಾದರೂ ಬದಲಾವಣೆಯಾಗುತ್ತದೆ. ಅದು ಬಿಟ್ಟು ಕಚೇರಿಯಲ್ಲೇ ಇದ್ದರೆ ಹೊರಗಡೆ ಹೇಗಿದೆ? ಏನಾಗಿದೆ? ಎಂಬುದು ಗೊತ್ತಾಗುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಸ್ವಚ್ಛತೆಯ ಹೊಣೆ ಹೊತ್ತಿರುವ ಅಧಿಕಾರಿಗಳಾಧಿಯಾಗಿ, ಆರೋಗ್ಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಬೇಕು. ಕಾರ್ಮಿಕರು ಸ್ವಚ್ಛತೆ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಎಂದು ನಿಗಾ ಇಡಬೇಕು. ರಸ್ತೆ ಮತ್ತು ಖಾಲಿ ಜಾಗದಲ್ಲಿರುವ ಕಸ ತೆರವುಗೊಳಿಸಿ ಅಲ್ಲಿಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿ ದಂಡ ವಿಧಿಸಬೇಕು. ಅಧಿಕಾರಿಗಳು ಆಗಾಗ ಈ ರೀತಿ ಮಾಡಿದರೆ ಪ್ರಮುಖ ರಸ್ತೆಗಳು ಕಸದ ರಾಶಿಯಿಂದ ಮುಕ್ತವಾಗಲಿವೆ ಎಂಬುವುದು ಸಾರ್ವಜನಿಕರ ಅಂಬೊಣ.

ಈ ಬಗ್ಗೆ ಹೆಬಳೆ ಗ್ರಾಮದ ನಿವಾಸಿ ನಾಗೇಶ ನಾಯ್ಕ ಮಾತನಾಡಿ ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ಪಂಚಾಯತ ಅನುದಾನದಲ್ಲಿ ಸಿಸಿಟಿವಿ ಅಳವಡಿಸಿದರು ಕೂಡ ಸಾರ್ವಜನಿಕರಿಗೆ ಪಂಚಾಯನ ಯಾವುದೇ ಭಯವಿಲ್ಲದೆ ರಸ್ತೆ ಪಕ್ಕದಲ್ಲಿ ಕಸ ಎಸೆದು ಹೋಗುತ್ತಿದ್ದಾರೆ. ತಕ್ಷಣ ಸಿಸಿಟಿವಿ ಪರಿಶೀಲನೆ ಮಾಡಿ ಕಸ ಎಸೆದರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಈ ಸುದ್ದಿ ಪ್ರಸಾರವಾದ ಬಳಿಕವಾದರು ಹೆಬಳೆ ಪಂಚಾಯತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಬಿದ್ದಿರುವ ಕಸಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಹಾಗೆಯೇ ಸಿಸಿಟಿವಿ ಪರಿಶೀಲನೆ ಮಾಡಿ ಕಸ ಎಸೆದು ಹೋದವ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಅಶಯವಾಗಿದೆ..
ಉದಯ ನಾಯ್ಕ ನುಡಿಸಿರಿ ನ್ಯೂಸ್, ಭಟ್ಕಳ

