ಸಾರಿಗೆ ಬಸ್ ಅಪಘಾತ: ಕಂದಕಕ್ಕೆ ಬಿದ್ದರೂ ಪ್ರಯಾಣಿಕರು ಅಪಾಯದಿಂದ ಪಾರು

ಬೀದರ್: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಕಂದಕಕ್ಕೆ ಉರುಳಿ ಬಿದ್ದ ಘಟನೆ ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಸಾವಳಿ ಗ್ರಾಮದ ಬಳಿ ನಡೆದಿದೆ.

ಭಾಲ್ಕಿಯಿಂದ ಕಮಲನಗರ ಕಡೆ ಹೋಗುತ್ತಿದ್ದಾಗ ವೇಗವಾಗಿ ಎದುರುಗಡೆಯಿಂದ ಮತ್ತೊಂದು ಸಾರಿಗೆ ಬಸ್ ಬಂದಿದೆ. ಈ ವೇಳೆ ಆಗುತ್ತಿದ್ದ ಅಪಘಾತ ತಪ್ಪಿಸಿಲು ಹೋಗಿ ಬಸ್ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. 

ಹೆದ್ದಾರಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳು ಒನ್ ವೇ ಸಂಚಾರ ಮಾಡುತ್ತಿವೆ. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ತೆಲಂಗಾಣ ಬಸ್‌ನಿಂದಾಗಿ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಕಂದಕಕ್ಕೆ ಬಿದ್ದಿದೆ. ಬಸ್ಸಿನಲ್ಲಿ 10 ರಿಂದ 15 ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಮಲನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.