ಅಂಜನಾದ್ರಿ ದೇಗುಲಕ್ಕೆ ವರನಟ ಡಾ. ರಾಜಕುಮಾರ್ ಮೊಮ್ಮಗ ಭೇಟಿ

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರು ಹೊಸಪೇಟೆ – ಗಂಗಾವತಿಗೆ ಭೇಟಿ ನೀಡಿದಾಗಲೆಲ್ಲ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ನೆಚ್ಚಿನ ದೈವ ಪವನ ಸುತನ ದರ್ಶನ ಪಡೆದುಕೊಳ್ಳದೇ ಗಂಗಾವತಿಯಿಂದ ಪುನೀತ್ ರಾಜ್​​​ಮಾರ್ ನಿರ್ಗಮಿಸುತ್ತಿರಲಿಲ್ಲ.

ಇದೀಗ ಮಾವನ ನೆಚ್ಚಿನ ದೈವ ಸನ್ನಿಧಿಗೆ ಡಾ.ರಾಜಕುಮಾರ್ ಅವರ ಕುಟುಂಬಸ್ಥರಾದ ಪುನೀತ್​ ರಾಜ್​ಕುಮಾರ್ ಸಹೋದರಿ ಪೂರ್ಣಿಮಾ, ಪುನೀತ್ ಅಳಿಯ, ನಟ ಧೀರನ್ ರಾಮ್​ಕುಮಾರ್, ಮತ್ತು ಧನ್ಯಾ ರಾಮ್​ಕುಮಾರ್ ಭೇಟಿ ನೀಡಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ಡಾ. ರಾಜ್​​ಕುಮಾರ್ ಪುತ್ರಿ ಪೂರ್ಣಿಮಾ ಅವರು ನಟ ರಾಮ್​​ಕುಮಾರ್​ ಅವರೊಂದಿಗೆ ವಿವಾಹವಾಗಿದ್ದು, ಈ ದಂಪತಿಗೆ ಜನಿಸಿದ ಧೀರನ್ ಮತ್ತು ಧನ್ಯಾ ಎಂಬ ಇಬ್ಬರು ಮಕ್ಕಳೀಗ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಇದೀಗ ಧೀರನ್ ಅಭಿನಯದ ‘ಶಿವ 143’ ಸಿನಿಮಾ ಪ್ರಮೋಷನ್​ಗಾಗಿ ಗಂಗಾವತಿಗೆ ಆಗಮಿಸಿದ್ದಾರೆ. ಅದಕ್ಕೂ ಪೂರ್ವದಲ್ಲಿ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷ ಎಂದರೆ ಧೀರನ್ ಧರಿಸಿದ್ದ ಅಂಗಿಯ ಮೇಲೆ ಮಾವ ಪುನೀತ್ ನಟನೆಯ ನಾನಾ ಚಿತ್ರದ ಪೋಸ್ಟರ್​ಗಳಿದ್ದು ಜನರ ಗಮನ ಸೆಳೆಯಿತು.