ಮೈಸೂರು: ಶನಿವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸರ್ಕಾರದ ಸಾಧನಾ ಸಮಾವೇಶ ಆಯೋಜನೆಗೊಂಡಿದೆ. ಇದು ಒಂದರ್ಥದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಸಮಾವೇಶವಾಗಿ ಮಾರ್ಪಟ್ಟಿದೆ. ಹೀಗಾಗಿ ಕಾರ್ಯಕರ್ತರಿಗೆ ದುಡ್ಡು ಕೊಟ್ಟು ಸಮಾವೇಶಕ್ಕೆ ಕರೆ ತರಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ನಾಯಕರು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಒಂದು ಬಸ್ಸಿಗೆ 5 ರಿಂದ 6 ಸಾವಿರ ರೂ. ಕೊಡುತ್ತೇವೆ. 19 ರ ಸಮಾವೇಶಕ್ಕೆ ಜನ ಕರೆದುಕೊಂಡು ಬರಬೇಕು ಅಷ್ಟೇ ಎಂದು ಮುಖಂಡರು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಾಯಕರು ಈ ಹೇಳಿಕೆ ನೀಡಿದ್ದಾರೆ. ಜುಲೈ 19ರ ಸಮಾವೇಶಕ್ಕೆ ಜನ ಕರೆ ತರಬೇಕು ಅಷ್ಟೇ. ಕರ್ಕೊಂಡ್ ಬರ್ತೀವಿ. ಒಂದು ಬಸ್ಸಿಗೆ 5 ರಿಂದ 6 ಸಾವಿರ ಕೊಡುತ್ತೀರಿ. ಇದನ್ನ ಬಿಟ್ಟರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಕಷ್ಟವನ್ನು ಕೇಳುವವರು ಯಾರಿದ್ದೀರಿ ಎಂದು ಕೇಳಿದ್ದಾರೆ.
ನಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರಿಲ್ಲ. ನಮ್ಮ ಸರ್ಕಾರವೇ ಅಧಿಕಾರಿಗಳನ್ನು ಹಾಕುತ್ತದೆ. ಆದರೆ ಇರುವ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೆ. ಹಾಗಾಗಿ ನಾವು ಎಲ್ಲಿಗೆ ಹೋಗಿ ಕೇಳುವುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸೋತ ನಂತರ ಚಾಮುಂಡೇಶ್ವರಿ ಕ್ಷೇತ್ರ ಕೈ ಬಿಟ್ಟಿದ್ದಾರೆ ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ನಾಯಕ ಧನಗಹಳ್ಳಿ ಬಸವರಾಜು ಈ ರೀತಿ ಹೇಳಿದ್ದಾರೆ.
