ಮೈಸೂರು: ಆಷಾಢ ಮಾಸದ ಹಿನ್ನೆಲೆ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ರಾಜ್ಯ ಸೇರಿದಂತೆ ದೇಶದ ಇತರೆ ಭಾಗಗಳಿಂದಲೂ ಸಹ ಭಕ್ತರು ಮೈಸೂರಿಗೆ ಆಗಮಿಸುತ್ತಾರೆ. ಶುಕ್ರವಾರ ಇಂದು ಮೂರನೇ ಆಷಾಢ ಮಾಸದ ಸಂಭ್ರಮ ಅದ್ಧೂರಿಯಾಗಿ ನೆರವೇರುತ್ತಿದ್ದು, ತಾಯಿ ಚಾಮುಂಡೇಶ್ವರಿ ಗಜ ಲಕ್ಷ್ಮಿ ಮತ್ತು ನಾಗ ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ಆಷಾಢ ಶುಕ್ರವಾರದ ಹಿನ್ನೆಲೆ ದೇವಸ್ಥಾನದ ಒಳಾಂಗಣವನ್ನ ಕಮಲದ ಹೂವಿನಿಂದ ಅಲಂಕಾರ ಮಾಡಲಾಗಿದೆ. ತಾಯಿ ದರ್ಶನ ಕಣ್ತುಂಬಿಕೊಳ್ಳಲು ಮುಂಜಾನೆ 5 ಗಂಟೆಯಿಂದಲೇ ಮೆಟ್ಟಿಲು ಮಾರ್ಗವಾಗಿ ಬರುತ್ತಿರುವ ಭಕ್ತರು ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾಗುತ್ತಿದ್ದಾರೆ
ಇನ್ನೂ ಗುರುವಾರ (ಜು.10) ರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ವಾಹನ ಪ್ರವೇಶ ನಿಷೇಧಿಸಲಾಗಿದೆ. ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟ ಹತ್ತುವ ಭಕ್ತರಿಗೆ ಇಂದು ಬೆಳಗ್ಗೆ 5 ರಿಂದ ಸಂಜೆ 6 ಗಂಟೆ ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ತೆರಳಲು ಲಲಿತ ಮಹಲ್ ಪಾರ್ಕಿಂಗ್ ಸ್ಥಳದಿಂದ ಶುಕ್ರವಾರ (ಇಂದು) ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮೈಸೂರು ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

