ಬಾಗಲಕೋಟೆ: ಬೆನಕಟ್ಟಿ ಗ್ರಾಮದಲ್ಲಿ ಜೋಡೆತ್ತುಗಳೆರಡು 10 ಗಂಟೆಗಳಲ್ಲಿ ಬರೋಬ್ಬರಿ 20 ಎಕರೆ ಈರುಳ್ಳಿ ಬಿತ್ತನೆ ಮಾಡಿ ವಿಶಿಷ್ಟ ಸಾಧನೆ ಮಾಡಿವೆ.

ಅಶೋಕ್ ಮೆಳ್ಳಿ ಅವರು ಒಂದೇ ದಿನದಲ್ಲಿ 20 ಎಕ್ರೆ ಬಿತ್ತನೆ ಮಾಡುವ ಗುರಿ ಹೊಂದಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ತಮ್ಮ ಎತ್ತುಗಳಿಂದ ಬೆನಕಟ್ಟಿ ಗ್ರಾಮದ ಹೊರವಲಯದಲ್ಲಿರುವ 20 ಎಕ್ರೆ ಹೊಲದಲ್ಲಿ ಸಂಪೂರ್ಣವಾಗಿ ಈರುಳ್ಳಿ ಬಿತ್ತನೆ ಮಾಡಿ ಸಾಹಸ ಮರೆದಿದ್ದಾರೆ. ಅಶೋಕ್ ಮೆಳ್ಳಿ ಅವರ ಈ ಸಾಧನೆಗೆ ಗ್ರಾಮದ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಿಲಾರಿ ತಳಿಯ ಈ ಎತ್ತುಗಳ ನಡಿಗೆಯಲ್ಲಿನ ವೇಗ, ಬಿತ್ತನೆ ಜಾಣ್ಮೆಯನ್ನು ನೋಡಿ 3 ತಿಂಗಳ ಹಿಂದೆ ಸಂಗಾಪುರ ಗ್ರಾಮದಿಂದ 2.20 ಲಕ್ಷ ರೂ. ನೀಡಿ ಖರೀದಿಸಿದ್ದರು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಬಿತ್ತನೆ ಆರಂಭಿಸಿದ್ದರು. ಆದರೆ ಮಧ್ಯಾಹ್ನ 1 ಗಂಟೆಗೆ ಮಳೆ ಬಂದ ಕಾರಣ ಮತ್ತೆ ಬಿಡುವು ಮಾಡಿಕೊಂಡು 3 ಗಂಟೆಗೆ ಬಿತ್ತನೆ ಆರಂಭಿಸಿ ಸಾಯಂಕಾಲ 7 ಗಂಟೆಯ ಹೊತ್ತಿಗೆ ಇಡೀ 20 ಎಕ್ರೆ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡಿ ವಿಶಿಷ್ಟ ಸಾಹಸ ಮೆರೆದಿದ್ದಾರೆ.

ಅಶೋಕ್ ಮೆಳ್ಳಿ ಈ ಹಿಂದೆ ಎತ್ತುಗಳಿಗೆ ಜತ್ತಿಗೆ (ಕೊರಳು ಕುಣಿಕೆ) ಕಟ್ಟದೇ 20 ಎಕರೆ ಬಿತ್ತನೆ ಮಾಡಿದ್ದರು. ಈಗ ಮತ್ತೆ ತಮ್ಮ ಹೊಸದಾಗಿ ಖರೀದಿಸಿದ ಎತ್ತುಗಳಿಂದ ಈರುಳ್ಳಿ ಬಿತ್ತನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ರೈತ ಅಶೋಕ್ ಅವರು ಭವಿಷ್ಯದಲ್ಲಿ 30 ರಿಂದ 36 ಎಕ್ರೆ ವಿಸ್ತೀರ್ಣದ ಹೊಲದಲ್ಲಿ ಜೋಳ ಆಥವಾ ಕಡಲೆ ಬಿತ್ತನೆ ಮಾಡುವ ಕನಸು ಕಂಡಿದ್ದಾರೆ.
